ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನ ಅಭಿವೃದ್ಧಿ ಹಿನ್ನೆಲೆ ದೇಗುಲಕ್ಕೆ ಸೇರಿದ ಜಮೀನನ್ನು ಮರು ವಶ ಮಾಡಿಕೊಳ್ಳುವ ಕೆಲಸ ನಡೆಯುತ್ತಿದ್ದು, ನೆಲ್ಲಿಕಟ್ಚೆಯ ಅಶ್ವತ್ಥ ಮರದ ಸಮೀಪ ಇದ್ದ ಮನೆಯನ್ನು ಸೌಹಾರ್ಧಯುತವಾಗಿ ತೆರವು ಮಾಡಲಾಗಿದೆ.
ಈ ಜಮೀನು ವಾಲ್ಟರ್ ಲೋಬೋ ಎಂಬವರು 60 ವರ್ಷಗಳಿಂದ ಮನೆ ಹೊಂದಿದ್ದು, ಅದನ್ನು ಬಾಡಿಗೆಗೆ ನೀಡುತ್ತಿದ್ದರು. ಸುಮಾರು ಎಂಟರಿಂದ ಹತ್ತು ಸೆಂಟ್ಸ್ ಜಾಗವನ್ನು ವಾಲ್ಟರ್ ಲೋಬೋ ಅವರು ದೇವಸ್ಥಾನಕ್ಕೆ ಪ್ರೀತಿಯಿಂದ ಬಿಟ್ಟುಕೊಟ್ಟಿದ್ದಾರೆ. ಇದರ ಮೌಲ್ಯ ಸುಮಾರು ಒಂದು ಕೋಟಿಗೂ ಅಧಿಕವಾಗಿದ್ದು, ಯಾವುದೇ ಅಡ್ಡಿ ತೋರ್ಪಡಿಸದೆ ಅವರು ಜಾಗವನ್ನು ದೇಗುಲದ ಸ್ವಾಧೀನಕ್ಕೆ ಒಪ್ಪಿಸಿದ್ದಾರೆ.
ವಾಲ್ಟರ್ ಅವರ ಮನೆಯನ್ನು ತೆರವು ಮಾಡಲಾಗಿದ್ದು, ಅಲ್ಲೇ ಇದ್ದ ಅಶ್ವತ್ಥ ಮರಕ್ಕೆ ವಿಧಿವತ್ತಾದ ಸಾಂಪ್ರದಾಯಿಕ ಸಂಸ್ಕಾರಗಳನ್ನು ದೇವಾಲಯದ ವತಿಯಿಂದಲೇ ನಡೆಸುವುದಾಗಿ ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಹಾಗೆಯೇ ದೇಗುಲದ ಜಾಗವನ್ನು ದೇಗುಲಕ್ಕೆ ಸೌಹಾರ್ಧತೆಯಿಂದ ಬಿಟ್ಟು ಕೊಟ್ಟ ವಾಲ್ಟರ್ ಅವರಿಗೂ ದೇವರು ಒಳಿತು ಮಾಡಲಿ ಎಂದು ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದ್ದಾರೆ.
ಆ ಪರಿಸರದಲ್ಲಿ ಇನ್ನೂ ಮೂರು ಮನೆಗಳು ತೆರವಿಗೆ ಬಾಕಿ ಇದ್ದು ಮಕ್ಕಳ ಪರೀಕ್ಷೆ, ಮದುವೆ ಹಿನ್ನಲೆ ಕಾ ಲಾ ಕಾಲ ಕೇಳಿದ್ದಾರೆ. ಮಾನವೀಯ ನೆಲೆಯಲ್ಲಿ ಅವರಿಗೆ ಅವರು ಕೇಳಿದ ಕಾಲಾವಕಾಶ ನೀಡಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
























