ಕಾಸರಗೋಡು: ನೆರೆಮನೆಯಿಂದ ಚಿನ್ನ ಕದ್ದ ಆರೋಪ ಹೊತ್ತಿದ್ದ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಾಲತ್ತಡ್ಕದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಜಸೀಲಾ(24) ಎಂದು ಗುರುತಿಸಲಾಗಿದೆ.
ಜಸೀಲಾ ಸಾವಿಗೂ ಮುನ್ನ ವಿಡಿಯೋ ಒಂದನ್ನು ಮಾಡಿದ್ದು, ಅದರಲ್ಲಿ ತಾನು ಯಾವ ಚಿನ್ನವನ್ನೂ ಕದ್ದಿಲ್ಲ. ನಾನೇನೂ ತಪ್ಪು ಮಾಡಿಲ್ಲ. ನಾನು ಚಿನ್ನ ಕದ್ದಿದ್ದಾಗಿ ಆರೋಪಿಸಿ ಪೊಲೀಸರು ಮನೆಯನ್ನು ಶೋಧಿಸಿದರು. ಇದರಿಂದ ನನ್ನ ಮನೆಯವರು ತೀವ್ರ ನೊಂದಿದ್ದಾರೆ. ನಾನು ಕದ್ದಿದ್ದರೆ ಅಲ್ಲವೇ ಕೊಡುವುದು. ಇಲ್ಲವಾದರೆ ಎಲ್ಲಿಂದ ತಂದು ಕೊಡಲಿ. ನಾನು ಸತ್ತರೆ ನನಗೆ ಕಿರುಕುಳ ಕೊಟ್ಟವರಿಗೆ ಶಿಕ್ಷೆಯಾಗಬೇಕು. ನಾನು ಕದ್ದಿಲ್ಲ ಎಂದರೂ ಕೇಳುತ್ತಿಲ್ಲ. ಪೊಲೀಸರು ನನ್ನನ್ನು ಯಾಕೆ ಪೀಡಿಸುತ್ತಿದ್ದಾರೆ ಎಂದು ಅತ್ತಿದ್ದಾರೆ.
ಘಟನೆಯ ವಿವರ:
ಜಸೀಲಾ ನೆರೆಮನೆಯಾಕೆಯ ಜೊತೆ ಕೋಝಿಕ್ಕೋಡ್ ಹೋಗಿದ್ದರು. ಹಿಂದಿರುಗಿ ಬಂದ ಬಳಿಕ ನೆರೆಮನೆಯಲ್ಲಿ ಸುಮಾರು 9.5 ಪವನಿನ ಚಿನ್ನದ ಸರ ಕಾಣೆಯಾಗಿತ್ತು. ನೆರೆಮನೆಯಾಕೆ ಜಸೀಲಾ ಜೊತೆ ಹೋಗಿದ್ದಾಗ ಸರ ಕಳವಾಗಿದ್ದಾಗಿ ಹೇಳಿದ್ದರು. ಅದರಂತೆ ಪೊಲೀಸರು ಜಸೀಲಾ ಅವರನ್ನು ತೀವ್ರವಾಗಿ ವಿಚಾರಣೆ ಮಾಡಿದ್ದರು. ಅವರ ಮನೆಯನ್ನು ಶೋಧ ಮಾಡಿದ್ದರು. ಜಸೀಲಾ ಪತಿ ಮತ್ತು ಆಕೆಯ ಅತ್ತೆ ಸಹ ಅವರನ್ನು ಸಂಶಯಿಸಿದ್ದರು.
ಜಸೀಲಾ ತಾಯಿಯೂ ಘಟನೆ ಬಗ್ಗೆ ಮಾತನಾಡಿದ್ದು ತಮ್ಮ ಮಗಳು ಕುರಾನ್ ಮೇಲೆ ಕೈ ಇರಿಸಿ ಚಿನ್ನ ಕದ್ದಿಲ್ಲ ಎಂದು ಹೇಳಿದ್ದರೂ ಆಕೆಯನ್ನು ಯಾರೂ ನಂಬಿಲ್ಲ. ಅವಳ ಗಂಡ ಮತ್ತು ಕುಟುಂಬದವರು ಸಹ ನಂಬಿಲ್ಲ. ಚಿನ್ನ ಕಳವಾದ ಮನೆಯವರು ಸಹ ನಮ್ಮ ಮನೆಗೆ ಬಂದು ಬೆದರಿಕೆ ಹಾಕಿದ್ದರು. ನಮ್ಮ ಮಗಳು ಈ ಎಲ್ಲಾ ಘಟನೆಗಳಿಂದ ನೊಂದಿದ್ದಳು ಎಂದು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಜಸೀಲಾಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಫೆ. 15 ರಂದು ವಿಷ ಕುಡಿದಿದ್ದ ಜಸೀಲಾ ಕಾಸರಗೋಡು ಆಸ್ಪತ್ರೆಯಲ್ಲಿ ಫೆ. 20 ರಂದು ಮೃತಪಟ್ಟಿದ್ದಾರೆ.
























