ಕುತೂಹಲ ಕೆರಳಿಸಿರುವ ಎರಡು ಅಜೇಯ ತಂಡಗಳ ನಡುವಿನ ಹೋರಾಟ
ಅಹಮದಾಬಾದ್: ಟಿ20 ವಿಶ್ವಕಪ್ ಕೂಟದ ಗುಂಪು ಹಂತದಲ್ಲಿ ಅಜೇಯವಾಗಿ ಉಳೀದು ಸೂಪರ್ 8 ಸುತ್ತಿಗೆ ಬಂದಿರುವ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳು ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೂಒರ್ 8 ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಭಾರತ ಗುಂಪು ಹಂತದಲ್ಲಿ ಯುಎಸ್ಎ, ನಮೀಬಿಯಾ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡಗಳನ್ನು ಸೋಲಿಸುವ ಮೂಲಕ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಇಂದಿನಿಂದ ಭಾರತಕ್ಕೆ ನಿಜವಾದ ಸವಾಲು ಎದುರಾಗಲಿದೆ.
ಭಾರತದ ಓಪನರ್ ಅಭಿಷೇಕ್ ಶರ್ಮಾ ಇನ್ನೂ ಸಿಡಿಯದಿರುವುದು ಭಾರತಕ್ಕೆ ದೊಡ್ಡ ಚಿಂತೆಯ ವಿಷಯ. ಈ ಕೂಟದಲ್ಲಿ ಅವರು ಮೂರು ಸಲ ಶೂನ್ಯಕ್ಕೆ ಔಟಾಗಿ ನಿರಾಶೆಯುಂಟು ಮಾಡಿದ್ದಾರೆ. ಉಳೀದ ಬ್ಯಾಟ್ಸ್ಮನ್ ಆಡುತ್ತಿರುವ ಕಾರಣ ಭಾರತ ಗೆಲ್ಲುತ್ತಿದೆ. ಆಟಗಾರರ ಗಾಯಗಳ ಚಿಂತೆಯೂ ಭಾರತಕ್ಕಿದೆ.
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೂಪರ್ 8 ಪಂದ್ಯ ಫೆಬ್ರವರಿ 22ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮುಖ್ಯವಾಗಿದೆ. ಈ ಸುತ್ತಿನ ಪ್ರತಿ ಗೆಲುವು ತಂಡವನ್ನು ಸೆಮಿಫೈನಲ್ಗೆ ಕರೆದೊಯ್ಯುತ್ತದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿವೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿರುವ ಪಿಚ್ ಬ್ಯಾಟ್ಸ್ಮನ್ಗಳಿಗೆ ಅನುಕೂಲಕರವಾಗಿದೆ. ಮೈದಾನ ದೊಡ್ಡದಾಗಿರುವುದರಿಂದ, ಬ್ಯಾಟ್ಸ್ಮನ್ಗಳಿಗೆ ಬೌಂಡರಿ ಮತ್ತು ಸಿಕ್ಸರ್ಗಳನ್ನು ಸಿಡಿಸುವುದು ಸುಲಭವಾಗುತ್ತದೆ. ಆದ್ದರಿಂದ, ಟಾಸ್ ಗೆದ್ದ ನಂತರ, ಮೊದಲು ಬೌಲಿಂಗ್ಗೆ ಆದ್ಯತೆ ನೀಡಲಾಗುವುದು. ಮೊದಲ ಇನ್ನಿಂಗ್ಸ್ ಅನ್ನು ಕಡಿಮೆ ರನ್ಗಳಿಗೆ ಸೀಮಿತಗೊಳಿಸುವ ಮೂಲಕ ಎರಡನೇ ಇನ್ನಿಂಗ್ಸ್ನಲ್ಲಿ ರನ್ಗಳನ್ನು ಬೆನ್ನಟ್ಟುವುದು ಸುಲಭವಾಗುತ್ತದೆ. ಇಬ್ಬನಿ ಅಂಶದಿಂದಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಬೌಲರ್ಗಳು ಬೌಲಿಂಗ್ ಮಾಡುವುದು ಸುಲಭವಲ್ಲ. ಆದ್ದರಿಂದ ಟಾಸ್ ನಿರ್ಧಾರ ಮುಖ್ಯವಾಗಿರುತ್ತದೆ.
ಎರಡೂ ತಂಡಗಳು ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿವೆ. ಆದ್ದರಿಂದ ಭಾನುವಾರ ಎರಡು ತಂಡಗಳಲ್ಲಿ ಒಂದು ತಂಡವು ತನ್ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವುದು ಖಚಿತ. ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು ಎಂಟನೇ ಬಾರಿ. ಇಲ್ಲಿಯವರೆಗೆ ಆಡಿರುವ 7 ಪಂದ್ಯಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ದಕ್ಷಿಣ ಆಫ್ರಿಕಾ ಕೇವಲ 2 ಪಂದ್ಯಗಳನ್ನು ಗೆದ್ದಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಇಂದಿನ ಟಿ20 ಪಂದ್ಯ ಉಭಯ ತಂಡಗಳ ನಡುವಿನ 36ನೇ ಪಂದ್ಯವಾಗಿರಲಿದೆ. ಹೆಡ್-ಟು-ಹೆಡ್ ದಾಖಲೆಗಳ ಬಗ್ಗೆ ಹೇಳುವುದಾದರೆ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾದ ಮೇಲೆ ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೆ ಆಡಿರುವ 35 ಪಂದ್ಯಗಳಲ್ಲಿ, ಭಾರತೀಯ ತಂಡ 21 ಪಂದ್ಯಗಳನ್ನು ಗೆದ್ದುಕೊಂಡಿದೆ. ಇತ್ತ ದಕ್ಷಿಣ ಆಫ್ರಿಕಾ ತಂಡವು 13 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಉಳಿದಂತೆ ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಅಜೇಯವಾಗಿದೆ. ಈ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಏಕೈಕ ಟಿ20 ಪಂದ್ಯವನ್ನು ಆಡಲಾಗಿದೆ. 2025ರಲ್ಲಿ ಈ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕವನ್ನು 30 ರನ್ಗಳಿಂದ ಸುಲಭವಾಗಿ ಸೋಲಿಸಿತ್ತು.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಜೇಸನ್ ಸ್ಮಿತ್, ಅನ್ರಿಚ್ ನೋಕಿಯಾ, ಲುಂಗಿ ಎನ್ಗಿಡಿ, ಮಾರ್ಕೊ ಯಾನ್ಸೆನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್ ಮತ್ತು ಕ್ವೆನಾ ಮಫಾಕ.
























