ಬಂಟ್ವಾಳ : ಮೆಸ್ಕಾಂ ಮೀಟರ್ ರೀಡರ್ ಮಾಡುವ ವ್ಯಕ್ತಿಯ ಮೇಲೆ ಮನೆಯ ಅಕುನಾಯಿ ದಾಳಿ ಮಾಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಹೊರಗುತ್ತಿಗೆ ಆಧಾರದಲ್ಲಿ ಮೀಟರ್ ರೀಡಿಂಗ್ ಮಾಡುವ ಸಂಪತ್ ದಾಳಿಗೊಳಗಾದ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿರುವ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ತಾಲೂಕಿನ ಮೂಲೂರು ಇರಾ ನಿವಾಸಿ ಸಂಪತ್ ಎಂಬವರ ಮೇಲೆ ನಾಯಿ ದಾಳಿ ಮಾಡಿದೆ. ಸಂಪತ್ ಬಂಟ್ವಾಳ ಮೆಸ್ಕಾಂ ಇಲಾಖೆಯ ಹೊರಗುತ್ತಿಗೆಯಲ್ಲಿ ಸೂಪರ್ವೈಸರ್ ವೃತ್ತಿಯಲ್ಲಿದ್ದಾರೆ. ಆದರೆ ಕಳೆದ ಹತ್ತು ತಿಂಗಳಿನಿಂದ ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿ ಇಲ್ಲದೆ ಇರುವ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ಕೈತ್ರೋಡಿ ಕ್ವಾಟರ್ಸ್ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿದ್ದಾರೆ.
ಫೆ.16ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ರಾಯಿ ಕೈತ್ರೋಡಿ ಎಂಬಲ್ಲಿ ಮನೆಯೊಂದರ ಮೀಟರ್ ರೀಡಿಂಗ್ ಮಾಡಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಬೈಕ್ನ ಬಳಿ ತೆರಳುತ್ತಿದ್ದಂತೆ ಮನೆಯಂಗಳದಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ತುಂಡರಿಸಿದ ಬಂದು ದಾಳಿ ಮಾಡಿದೆ. ಸಂಪತ್ ಅವರ ಬಲ ಕೈ ಹಾಗೂ ಕಾಲಿಗೆ ಬಲವಾದ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
























