ಕಲಾವಿದರ ಸಂಸ್ಮರಣೆ ಮತ್ತು ತಾಳಮದ್ದಳೆ

ಪುತ್ತೂರು: ಯಕ್ಷಗಾನ ಕಲಾವಿದ, ಸಂಘಟಕ ಪಿ.ಹರಿಶ್ಚಂದ್ರ ಆಚಾರ್ಯ ಇಳಂತಿಲ ಮತ್ತು ಅರ್ಥಧಾರಿ, -ಪ್ರಸಂಗಕರ್ತ ಗಣೇಶ ಆಚಾರ್ಯ ಕುಂಜೂರು ಇವರ ಸಂಸ್ಮರಣೆ ಕಾರ್ಯಕ್ರಮವು 50ನೇ ವರ್ಷಾಚರಣೆಯಲ್ಲಿರುವ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಹಯೋಗದಲ್ಲಿ ಇಚ್ಚೂರು ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಪ್ರಧಾನ ಅರ್ಚಕ ಸುರೇಶ್ ಪುತ್ತೂರಾಯ ವಹಿಸಿದ್ದರು. ಅತಿಥಿಯಾಗಿ ಅರ್ಥಧಾರಿ ಜಬ್ಬಾರ್ ಸಮೋ , ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷ ಕವಿ ಪ್ರದೀಪ ಹೆಬ್ಬಾರ್ ಚಾರ, ಉಪ್ಪಿನಂಗಡಿ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಕಾರ್ಯದರ್ಶಿ ಶ್ರೀಪತಿ ಭಟ್, ಶ್ರೀಶ ರಾವ್ ಅಳಕೆ ಭಾಗವಹಿಸಿದ್ದರು.

ಪೆರಿಯಡ್ಕ ಸಾಂಸ್ಕೃತಿಕ ಕಲಾ ವೇದಿಕೆಯ ಸಂಚಾಲಕ ಕೆ. ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಹರಿಶ್ಚಂದ್ರ ಆಚಾರ್ಯರ ಸಂಸ್ಮರಣೆ ಮಾಡಿ ಯಕ್ಷಗಾನದ ಅತೀವ ಅಭಿಮಾನಿಯಾಗಿ ಸಂಘಟಕರಾಗಿ, ಕಲಾವಿದನಾಗಿ ಅವರ ಸೇವೆ ಅಮೂಲ್ಯವೆಂದು ತಿಳಿಸಿದರು.





















































 
 

ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನವನ್ನು ಸ್ಥಾಪಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತಾಳಮದ್ದಳೆಗಳನ್ನು ನಡೆಸುತ್ತಿದ್ದ ಯಕ್ಷ ಕವಿ ದಿ. ಗಣೇಶ ಆಚಾರ್ಯ ಕುಂಜೂರು ಪ್ರತಿಷ್ಠಾನದ ಮೂಲಕ ಯಕ್ಷಸೇವೆಯನ್ನು ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಷ್ಠಾನದ ಸದಸ್ಯ ಮಾಣಿ ಸತೀಶ ಆಚಾರ್ಯ ತಿಳಿಸಿದರು.

ಸಂಸ್ಮರಣೆ ಅಂಗವಾಗಿ ಕವಿ ಶ್ರೀಧರ ಡಿ.ಎಸ್. ರಚಿತ ಶಲ್ಯಸಂಗ್ರಹ ಮತ್ತು ಕುಂಜೂರು ಗಣೇಶ ಆಚಾರ್ಯ ವಿರಚಿತ ನಳ ಸೇತುಬಂಧ ತಾಳಮದ್ದಳೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಡಿ.ಕೆ. ಆಚಾರ್ಯ ಅಲಂಕಾರು, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್ ಬಿ. ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ದಿವಾಕರ ಆಚಾರ್ಯ ನೇರೆಂಕಿ , ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ, ಅಚ್ಚುತ್ತ ಪಾಂಗಣ್ಣಾಯ, ಗುರುಮೂರ್ತಿ ಅಮ್ಮಣ್ಣಾಯ ಭಾಗವಹಿಸಿದ್ದರು.

ಶಲ್ಯ ಸಂಗ್ರಹದಲ್ಲಿ ಅರ್ಥಧಾರಿಗಳಾಗಿ ಜಯರಾಮ ಪೂಜಾರಿ ನರಿಕೊಂಬು (ಶಲ್ಯ)ಶ್ರೀಧರ ಎಸ್. ಪಿ. ಕೃಷ್ಣಾಪುರ (ಕೌರವ)ದಿವಾಕರ ಆಚಾರ್ಯ ಹಳೆನೇರೆಂಕಿ (ಕರ್ಣ), ನಳ ಸೇತುಬಂಧದಲ್ಲಿ ಜಬ್ಬಾರ್ ಸಮೋ (ಅಗಸ್ತ್ಯ )ಸತೀಶ್ ಆಚಾರ್ಯ ಮಾಣಿ(ನಳ) ಶ್ರೀಧರ ಎಸ್. ಪಿ ಕೃಷ್ಣಾಪುರ(ವರುಣ)ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀರಾಮ)ಪ್ರದೀಪ ಹೆಬ್ಬಾರ್ ಚಾರ (ಲಕ್ಷ್ಮಣ)ಭಾಗವಹಿಸಿದ್ದರು .

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಪುತ್ತೂರಾಯ ವಂದಿಸಿದರು.

error: Content is protected !!
Scroll to Top