ಲಕ್ನೋ: ಬಾಬ್ರಿ ಮಸೀದಿಯನ್ನು ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ಮರು ನಿರ್ಮಾಣ ಮಾಡಲಾಗುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ಬಾಬ್ರಿ ಮಸೀದಿಯ ನಿರ್ಮಾಣವನ್ನು ಅಂತ್ಯದಿನಕ್ಕೆ ಹೋಲಿಕೆ ಮಾಡಿರುವ ಅವರು ಆ ದಿನ ಮರಳಿ ಬರುವುದಿಲ್ಲ. ನೀವು ಭಾರತದಲ್ಲಿ ಇರಲು ಬಯಸಿದರೆ ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಬಾಬ್ರಿ ಮಸೀದಿ ಮರು ನಿರ್ಮಾಣದ ಕನಸು ಕಾಣುತ್ತಿರುವವರಿಗೆ ಹೆಸರು ಹೇಳದೆಯೇ ತಿರುಗೇಟು ನೀಡಿದ್ದಾರೆ.
ನಾವು ಅಯೋಧ್ಯೆಯಲ್ಲೇ ಬಾಲರಾಮನ ದೇವಾಲಯ ನಿರ್ಮಾಣ ಮಾಡುವುದಾಗಿ ಹೇಳಿದ್ದೆವು. ದೇವಾಲಯ ನಿರ್ಮಾಣ ಆಗಿದೆ. ಅದರಲ್ಲಿ ಏನಾದರೂ ಸಂದೇಹ ಉಳಿದಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಲವು ಅವಕಾಶವಾದಿಗಳು ಸಮಸ್ಯೆಗಳು ಬಂದಾಗ ರಾಮನನ್ನು ನೆನೆಯುತ್ತಾರೆ. ಆ ಬಳಿಕ ಅವನನ್ನು ಮರೆಯುತ್ತಾರೆ. ಅಂತಹವರನ್ನು ರಾಮ ಸಹ ಮರೆಯುತ್ತಾನೆ. ರಾಮ ದ್ರೋಹಿಗಳು, ರಾಮನ ಭಕ್ತರಿಗೆ ಗುಂಡು ಹಾರಿಸುವವರಿಗೆ ಈಗ ಜಾಗವಿಲ್ಲ. ಬಾಬ್ರಿ ಮಸೀದಿ ನಿರ್ಮಾಣ ಮಾಡುವ ಕನಸು ಇಟ್ಟುಕೊಂಡವರಿಗೂ ಅಂತಹ ದಿನ ಮತ್ತೆ ಬರುವುದಿಲ್ಲ ಎಂದು ಹೇಳಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
























