ಉಡುಪಿ: ಪ್ರೀತಿಸಿದವಳ ಜೊತೆ ಮೊಬೈಲಿನಲ್ಲಿ ಮಾತನಾಡುತ್ತಾ ರೂಮಿಗೆ ಹೋದ ಯುವಕ ನೇಣಿಗೆ ಶರಣಾದ ಘಟನೆ ಕುಂಜಿಬೆಟ್ಟುವಿನಲ್ಲಿ ನಡೆದಿದೆ.
ಮೃತನನ್ನು ರಂಜಿತ್ (28) ಎಂದು ಗುರುತಿಸಲಾಗಿದೆ.
ಪೈಂಟಿಂಗ್ ಕೆಲಸ ಮಾಡುತ್ತಿದ್ದ ರಂಜಿತ್ ಎಂದಿನಂತೆ ಜ. 29 ರಂದು ಸಹ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಕೆಲ ಸಮಯ ಮನೆಯವರ ಜೊತೆಗೆ ಸಮಯ ಕಳೆದಿದ್ದಾರೆ. ಅದಾದ ಬಳಿಕ ಫೋನಿನಲ್ಲಿ ತಮ್ಮ ಪ್ರೇಮಿಯ ಜೊತೆ ಮಾತನಾಡುತ್ತಾ ಕೋಣೆಗೆ ಹೋಗಿದ್ದಾರೆ.
ರಾತ್ರಿ ಸಮಯದಲ್ಲಿ ಮನೆಯ ಟ್ಯಾಂಕಿನಲ್ಲಿ ನೀರು ತುಂಬಿದಾಗ, ಅದನ್ನು ಆಫ್ ಮಾಡಲು ರಂಜಿತ್ ತಂದೆ ರಾಜು ಅವರು ಹೋಗಿದ್ದಾರೆ. ಈ ವೇಳೆ ಕಿಟಕಿಯ ಮೂಲಕ ಮಗನ ಕೋಣೆಯನ್ನು ನೋಡಿದಾಗ ಆತ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ತಕ್ಷಣವೇ ಮನೆಯವರೆಲ್ಲರೂ ಅವರನ್ನು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರು ಮೃತಪಟ್ಚಿದ್ದಾರೆ.
ಈ ಸಂಬಂಧ ಮೃತ ಅಣ್ಣ ರಕ್ಷಿತ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಸಾವಿನ ಮೇಲೆ ಅನುಮಾನ ಇರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.























