ಲಿಂಗಸೂಗೂರು: ಮೂರು ಎಕರೆ ಜಮೀನಿಗಾಗಿ ಮಗನೇ ಹೆತ್ತಮ್ಮನನ್ನು ಕಲ್ಲು ಎತ್ತಿ ಹಾಕಿ ಕೊಂದ ಘಟನೆ ಜಕ್ಕೇರುಮಡು ಗ್ರಾಮದಲ್ಲಿ ನಡೆದಿದೆ.
ಕುಮಾರ ಎಂಬಾತನೇ ಆರೋಪಿ. ಚಂದವ್ವ (55) ಎಂಬವರೇ ಮೃತ ದುರ್ದೈವಿ.
ಕುಮಾರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿ ಬಂದಿದ್ದ. ಈತನಿಗೆ ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಯ ಮೇಲೆ ಕಣ್ಣಿತ್ತು. ಆ ಜಮೀನನ್ನು ತನಗೆ ಮತ್ತು ಅಣ್ಣನಿಗೆ ಭಾಗ ಮಾಡಿ ಕೊಡುವಂತೆ ಆಗಾಗ್ಗೆ ಜಗಳ ಮಾಡುತ್ತಿದ್ದ. ಆದರೆ ಇದಕ್ಕೆ ತಾಯಿ ಒಪ್ಪುತ್ತಿರಲಿಲ್ಲ.
ತಾಯಿಯನ್ನು ಕೊಲ್ಲುವ ದಿನ ಮದ್ಯ ಸೇವನೆ ಮಾಡಿದ್ದ ಕುಮಾರ, ಆಸ್ತಿಗಾಗಿ ಜಗಳವಾಡಿದ್ದಾನೆ. ಈ ವೇಳೆ ಕೋಪದಲ್ಲಿ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮುದಗಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿ ಕುಮಾರನ ಪತ್ತೆಗೆ ಬಲೆ ಬೀಸಿದ್ದಾರೆ.
























