ತಲೆಗೆ 1 ಕೋಟಿ ರೂ. ಬಹುಮಾನ ಹೊತ್ತಿದ್ದ ನಕ್ಸಲ್ ನಾಯಕ
ನವದೆಹಲಿ: ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರು ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯಲ್ಲಿ ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ಮುಖಂಡನ ಸಹಿತ 15 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹತ್ಯೆಯಾದ ನಕ್ಸಲ್ ಮುಖಂಡನನ್ನು ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯ ಪತಿರಾಮ್ ಮಾಂಝಿ ಎಂದು ಗುರುತಿಸಲಾಗಿದೆ. 1 ಕೋಟಿ ಬಹುಮಾನ ಹೊಂದಿದ್ದ ವಾಂಟೆಡ್ ನಕ್ಸಲ್ ನಾಯಕನಾಗಿದ್ದ. ಅನಲ್ ಅಲಿಯಾಸ್ ಪತಿರಾಮ್ ಮಾಂಝಿ ಮತ್ತು 15 ಇತರ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಎಡಪಂಥೀಯ ಉಗ್ರವಾದವನ್ನು ಕೊನೆಗೊಳಿಸುವ ಕೇಂದ್ರದ ಸಂಕಲ್ಪವನ್ನು ಪುನರುಚ್ಚರಿಸಿದ ಗೃಹ ಸಚಿವರು, ದಶಕಗಳಿಂದ ಭಯ ಮತ್ತು ಭಯೋತ್ಪಾದನೆಗೆ ಸಮಾನಾರ್ಥಕವಾಗಿರುವ ನಕ್ಸಲಿಸಂ ಅನ್ನು 2026ರ ಮಾರ್ಚ್ 31ರೊಳಗೆ ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಹಿಂಸೆ, ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಸಿದ್ಧಾಂತವನ್ನು ತ್ಯಜಿಸಿ, ಅಭಿವೃದ್ಧಿ ಮತ್ತು ನಂಬಿಕೆಯ ಮುಖ್ಯವಾಹಿನಿಗೆ ಸೇರಲು ಉಳಿದ ನಕ್ಸಲರಿಗೆ ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಸಲಹೆ ನೀಡಿದ್ದಾರೆ.
ಚೈಬಾಸಾದ ಸಾರಂಡಾ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ. ಜನವರಿ 17-18ರಂದು ಬಸ್ತಾರ್ ವ್ಯಾಪ್ತಿಯ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ. ಎನ್ಕೌಂಟರ್ ನಂತರ ಎರಡು ಎಕೆ -47 ರೈಫಲ್ಗಳು, ಒಂದು ಐಎನ್ಎಸ್ಎಎಸ್ ರೈಫಲ್, ಎರಡು 303 ರೈಫಲ್ಗಳು ಮತ್ತು ಒಂದು ಬಿಜಿಎಲ್ ಲಾಂಚರ್ ಜೊತೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
























