ಎಸ್ಡಿಪಿಐ ಓಲೈಸಲು ಹಿಂದೂ ವಿರೋಧಿ ಹೇಳಿಕೆ ಎಂದು ಟೀಕೆ
ಮಂಗಳೂರು : ದೇವಸ್ಥಾನಗಳು ಎಲ್ಲರೂ ಹೋಗುವ ಜಾಗ ಅಲ್ಲಿ ಕೇಸರಿ ಧ್ವಜ ಸೇರಿದಂತೆ ಯಾವುದೇ ಧ್ವಜ ಹಾರಿಸಬಾರದು ಎಂದಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕ ರಮಾನಾಥ ರೈಯವರ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.ಅವರು ನೀಡಿದ ಹೇಳಿಕೆ ಹಿಂದೂ ನಾಯಕರನ್ನು ಕೇರಳಿಸಿದೆ.
ಬುಧವಾರ ಮಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಮನರೇಗ ಯೋಜನೆಯ ಹೆಸರು ಬದಲಾವಣೆ ವಿರುದ್ಧ ನಡೆದ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ರಮಾನಾಥ ರೈ ಉಡುಪಿ ಪರ್ಯಾಯ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲು ಉಡುಪಿ ಜಿಲ್ಲಾಧಿಕಾರಿ ಕೇಸರಿ ಧ್ವಜ ಬೀಡಿದ ವಿವಾದವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
ರಮಾನಾಥ ರೈಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ನೀವು ಒಂದು ದೈವದ ಗುತ್ತು ಮನೆಯವರಾಗಿ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಅನೇಕ ನೆಟ್ಟಿಗರು ಹೇಳಿದ್ದಾರೆ. ಉಡುಪಿ ಮಠ ಪರ್ಯಾಯ ಮಹೋತ್ಸವದಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಕೇಸರಿ ಧ್ವಜ ಹಾರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಾಜಿ ಸಚಿವ ರಮಾನಾಥ ರೈ ಇದನ್ನು ಖಂಡಿಸುವ ಭರದಲ್ಲಿ ದೇವಾಲಯದಲ್ಲಿ ಕೇಸರಿ ಬಾವುಟ ಹಾಕಬೇಡಿ ಎಂದು ಹೇಳಿದ್ದಾರೆ.
ಉಡುಪಿ ಡಿಸಿ ಭಗವಾಧ್ವಜ ಹಾರಿಸಿದ್ದ ತಪ್ಪು, ಇದನ್ನು ಒಪ್ಪಲು ಸಾಧ್ಯವಿಲ್ಲ. ಅವರ ಮೇಲೆ ಸರಿಯಾದ ಕ್ರಮ ಆಗಬೇಕು. ದೇವಾಲಯದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಪತಾಕೆ ಧಿಕ್ಕರಿಸಬೇಕು. ದೇಗುಲದಲ್ಲಿ ಕಾಂಗ್ರೆಸ್, ಕೇಸರಿ, ಹಸಿರು ಯಾವುದೇ ಬಾವುಟ ಹಾಕಬೇಡಿ ಎಂದು ಹೇಳಿದ್ದಾರೆ. ದೇವಸ್ಥಾನದಲ್ಲಿ ನಡೆಯುವುದು ಕಾರ್ಯಕ್ರಮವೂ ಎಲ್ಲರಿಗೂ ಸಂಬಂಧಿಸಿದೆ. ಈ ಕಾರಣಕ್ಕೆ ದೇಗುಲದಲ್ಲಿ ಕೇಸರಿ ಧ್ವಜ ಹಾರಿಸಬಾರದು. ದೇಗುಲದ ಉತ್ಸವಗಳಲ್ಲಿ ಭಗವಾಧ್ವಜ ಹಾರಿಸುವುದನ್ನು ವಿರೋಧಿಸಬೇಕು ಎಂದು ಅವರು ಮಂಗಳೂರಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ವೇಳೆ ಹೇಳಿದ್ದಾರೆ.
ಮಾಜಿ ಸಚಿವ ರಮಾನಾಥ ರೈ ನೀಡಿದ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಹಾಗೂ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ. ನೀವು ದೈವರಾಧಕರು, ಒಂದು ಗುತ್ತಿನ ಮನೆಯವರಾಗಿ ಹೀಗೆ ಅವಮಾನ ಮಾಡುವುದು ಸರಿಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹಿಂದೂ ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸದೆ ಬೇರೆ ಯಾವ ಧ್ವಜ ಹಾರಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ದೇವಾಲಯದ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಕೆಲವೊಂದು ನೆಟ್ಟಿಗರು ಹೇಳಿದ್ದಾರೆ.
ಎಸ್.ಡಿ.ಪಿ.ಐ ಓಲೈಕೆ ಹೇಳಿಕೆ
ಎಸ್.ಡಿ.ಪಿ.ಐ ಓಲೈಸಲು ರಮಾನಾಥ ರೈ ಇಂತ ಹೇಳಿಕೆ ನೀಡಿದ್ದಾರೆ. ರೈ ಹೇಳಿಕೆ ಕಾಂಗ್ರೆಸ್ ಮಾನಸಿಕತೆಯನ್ನು ತೋರಿಸುತ್ತದೆ. ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾಕದೆ ಬೇರೆ ಯಾವ ಬಣ್ಣದ ಧ್ವಜ ಹಾಕಬೇಕು. ನಿನ್ನೆ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾನ್ಫರೆನ್ಸ್ ಮಂಗಳೂರಿನಲ್ಲಿ ನಡೆದಿದೆ. ಅವರ ಓಲೈಕೆಗಾಗಿ ರಮಾನಾಥ ರೈ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ನಿಷೇಧಿತ ಪಿಎಫ್ಐ ನ ಮುಖವಾಣಿ SDPI. PFI ನಲ್ಲಿದ್ದವರೇ SDIP ನಲ್ಲಿ ಇರುವುದು. ಈ ಹಿಂದೊಮ್ಮೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಸಂಸದ ಬ್ರಿಜೇಶ್ ಚೌಟ ಟೀಕಿಸಿದ್ದಾರೆ.
























