ಧಾರವಾಡ: ಕೃಷಿ ಭೂಮಿಯಲ್ಲಿ ನವಜಾತ ಶಿಶುವೊಂದನ್ನು ಯಾರೋ ಹೃದಯ ಹೀನರು ಬಿಟ್ಟು ಹೋಗಿದ್ದು, ಆ ಮಗುವಿಗೆ ನಾಯಿ ಕಚ್ಚಿದ ಹೃದಯ ವಿದ್ರಾವಕ ಘಟನೆ ಬೈಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮಗುವಿನ ಎಡಗಾಲಿನ ಹೆಬ್ಬೆರಳಿಗೆ ನಾಯಿ ಕಚ್ಚಿದ್ದು, ಗಂಭೀರ ಗಾಯವಾಗಿದೆ. ಮಗುವನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ನಾಯಿ ಕಾಲ್ಬೆರಳಿಗೆ ಸಂಪೂರ್ಣವಾಗಿ ಕಚ್ಚಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸೋಮವಾರ ಬೆಳಗ್ಗೆ ಹೊಲವೊಂದರಲ್ಲಿ ಶಿಶುವೊಂದು ಜೋರಾಗಿ ಅಳುತ್ತಿರುವ ಸದ್ದು ಕೇಳಿ ಬಂದಿದೆ. ಸ್ಥಳೀಯರು ಪರಿಶೀಲನೆ ನಡೆಸಿದಾಗ ನವಜಾತ ಶಿಶುವಿನ ಮೇಲೆ ನಾಯಿ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ನಾಯಿಯಿಂದ ಮಗುವನ್ನು ಆಶಾ ಕಾರ್ಯಕರ್ತರ ಸಹಾಯ ಪಡೆದು ರಕ್ಷಣೆ ಮಾಡಿದ್ದಾರೆ.
ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಗುವಿನ ವಾರಾಸ್ದಾರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
























