ಪುತ್ತೂರು: ಕಾರು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ತಂಡವೊಂದು ಚೂರಿಯಿಂದ ತಿವಿದು, ಹಲ್ಲೆ ನಡೆಸಿರುವ ಘಟನೆ ಕೆದಿಲದ ಸತ್ತಿಕಲ್ಲು ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಗಾಯಾಳುವನ್ನು ಸರೋಳಿ ನಿವಾಸಿ ಅಬ್ಬುಬಕ್ಕರ್ ರಾಶೀಕ್(28) ಎಂದು ಗುರುತಿಸಲಾಗಿದೆ.
ರಾಶೀಕ್ ಅವರಿಗೆ ಬೆಂಗಳೂರಿನ ಶ್ರೀರಾಮ ಫೈನಾನ್ಸ್ನವರು ಸ್ವಾಧೀನಕ್ಕೆ ತೆಗೆದುಕೊಂಡ ಇನ್ನೋವಾ ಕಾರನ್ನು ಮಾರಾಟ ಮಾಡಲಾಗಿತ್ತು. ಆದರೆ ಕಾರಿನ ಮಾಲೀಕ ಸೂರಜ್ ಎಂಬವರು ಈ ಕಾರನ್ನು ಮತ್ತೆ ಖರೀದಿ ಮಾಡಲು ತಮ್ಮ ಏಳೆಂಟು ಮಂದಿ ಸ್ನೇಹಿತರ ಜೊತೆಗೆ ರಾಶೀಕ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಸೂರಜ್ ಮತ್ತು ತಂಡ ಬಲವಂತವಾಗಿ ಕಾರಿನ ಕೀ ಕಸಿದುಕೊಳ್ಳಲು ಯತ್ನಿಸಿದ್ದು, ರಾಶೀಕ್ ಅವರಿಗೆ ಚೂರಿ ಇರಿದು ಹಲ್ಲೆ ಮಾಡಿದ್ದಾರೆ.
ಗಾಯಾಳು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದಾರೆ.
























