ಉಡುಪಿ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅಮಾನವೀಯ ಕೃತ್ಯದ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅವರು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಹಿಂದೂ ಸಮಾಜವು ಯಾವಾಗಲೂ ಶಾಂತಿ ಮತ್ತು ಸಹಬಾಳ್ವೆಯ ತತ್ವಗಳನ್ನು ಪಾಲಿಸುತ್ತಾ ಬಂದಿದೆ. ಯಾರ ಮೇಲೆಯೂ ಹಿಂಸೆಯನ್ನು ಅಸ್ತ್ರವಾಗಿ ಬಳಸಿ ನಾವೂ ಪಾರಮ್ಯ ಸಾಧಿಸಿಲ್ಲ. ಆದರೆ ಇಂದು ನೆರೆಯ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಮತ್ತು ದೌರ್ಜನ್ಯಗಳು ದುಃಖ ತರಿಸಿವೆ. ಭಾರತವು ರಾಜತಾಂತ್ರಿಕ ಬಿಕ್ಕಟ್ಟಿನ ಸಮಯದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ರಕ್ಷಣೆ ನೀಡಿ ತನ್ನ ಔದಾರ್ಯವನ್ನು ತೋರಿದೆ. ಆದರೆ ಅಲ್ಲಿನ ಹಿಂದೂಗಳು ಮಾತ್ರ ಇಂದು ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಜೀವ ಮತ್ತು ಆಸ್ತಿಯ ರಕ್ಷಣೆಗೆ ಹಾಗೂ ಅವರು ನೆಮ್ಮದಿಯಿಂದ ಬದುಕಲು ಸೂಕ್ತ ವ್ಯವಸ್ಥೆ ಮಾಡುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳ್ಳಲಿ ಮತ್ತು ಅಲ್ಲಿನ ಸಂತ್ರಸ್ತರಿಗೆ ದೈವಬಲ ಸಿಗಲಿ ಎಂದು ಪ್ರಾರ್ಥಿಸಲು ಜ. 10ರಂದು ವಿಶೇಷ ಅಭಿಯಾನಕ್ಕೆ ಶ್ರೀಗಳು ಕರೆ ನೀಡಿದ್ದಾರೆ. ಅಂದು ದೇಶದ ಪ್ರತಿಯೊಬ್ಬ ಹಿಂದೂಗಳೂ ತಮ್ಮ ಮನೆ, ಮಠ ಹಾಗೂ ಮಂದಿರಗಳಲ್ಲಿ ನಿತ್ಯ ಬೆಳಗುವ ದೀಪದ ಜೊತೆಗೆ, ಬಾಂಗ್ಲಾ ಹಿಂದೂಗಳ ರಕ್ಷಣೆಗಾಗಿ ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಒಂದು ಪ್ರತ್ಯೇಕ ದೀಪವನ್ನು ಬೆಳಗಿ ಪ್ರಾರ್ಥಿಸಬೇಕು ಎಂದು ಅವರು ವಿನಂತಿಸಿದ್ದಾರೆ.
























