ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌ ನಿಧನ

ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಅವಿರತ ಶ್ರಮಿಸಿದ್ದ ವಿಜ್ಞಾನಿ

ಪುಣೆ : ಪಶ್ಚಿಮ ಘಟ್ಟಗಳ ಸಂರಕ್ಷಣಾ ವರದಿಯನ್ನು ರಚಿಸಿದ್ದ ಹಿರಿಯ ಪರಿಸರ ವಿಜ್ಞಾನಿ, ಪರಿಸರವಾದಿ ಮತ್ತು ಬರಹಗಾರ ಡಾ. ಮಾಧವ ಗಾಡ್ಗೀಳ್ (83) ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು. ಪಶ್ಚಿಮ ಘಟ್ಟಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ನಿರ್ಮಿಸುವುದು ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಕೆ ನೀಡುತ್ತಲೇ ಇದ್ದರು. ಪಶ್ಚಿಮ ಘಟ್ಟ ಸಂರಕ್ಷಣೆಗೆ ಅವರು ಆಳವಾದ ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದರು.

ಮಾಧವ ಗಾಡ್ಗೀಳ್ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದರು ಮತ್ತು 2010ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ ಮುಖ್ಯಸ್ಥರಾಗಿದ್ದರು. ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್‌ ಆಯೋಗದ ವರದಿ ಎಂದೇ ಕರೆಯಲಾಗುತ್ತಿತ್ತು.





















































 
 

ಐದು ದಶಕಗಳಿಗೂ ಹೆಚ್ಚು ಕಾಲ ಭಾರತದ ಪರಿಸರ ಚಿಂತನೆ, ಸಂರಕ್ಷಣಾ ನೀತಿಗಳನ್ನು ಆಳವಾಗಿ ರೂಪಿಸಿದ ಮಾಧವ ಗಾಡ್ಗೀಳ್ 1983ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕರಾಗಿದ್ದರು. ಅವರ ನಾಯಕತ್ವದಲ್ಲಿ, ಈ ಕೇಂದ್ರವು ಪರಿಸರ ವಿಜ್ಞಾನ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಪರಿಸರ ನೀತಿಯಲ್ಲಿ ಸಂಶೋಧನೆಗಾಗಿ ಭಾರತದ ಅಗ್ರಗಣ್ಯ ಸಂಸ್ಥೆಗಳಲ್ಲಿ ಒಂದಾಗಿ ವಿಕಸನಗೊಂಡಿತು.

2010 ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ ರಚಿಸಿದ್ದ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಅಧ್ಯಕ್ಷತೆ ವಹಿಸುವ ಮೂಲಕ ಮಾಧವ ಗಾಡ್ಗೀಳ್ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ದುರ್ಬಲವಾದ ಪರ್ವತ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಗಣಿಗಾರಿಕೆ, ಕಲ್ಲುಗಣಿಗಾರಿಕೆ, ದೊಡ್ಡ ಅಣೆಕಟ್ಟುಗಳು ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ಕಠಿಣ ನಿಯಂತ್ರಣಗಳನ್ನು ವರದಿ ಶಿಫಾರಸು ಮಾಡಿತ್ತು. ಜ್ಞಾನಿಗಳು ಮತ್ತು ಪರಿಸರವಾದಿಗಳು ಅದರ ಆಳ ಮತ್ತು ಮುನ್ನೆಚ್ಚರಿಕೆಯ ವಿಧಾನಕ್ಕಾಗಿ ಪ್ರಶಂಸಿಸಿದರೂ, ಇದು ಹಲವಾರು ರಾಜ್ಯ ಸರ್ಕಾರಗಳು ಮತ್ತು ಅಭಿವೃದ್ಧಿ ಲಾಬಿಗಳಿಂದ ಬಲವಾದ ವಿರೋಧವನ್ನು ಉಂಟುಮಾಡಿತ್ತು.

ಮಾಧವ ಗಾಡ್ಗೀಳ್ ಭಾರತೀಯ ಪರಿಸರ ವಿಜ್ಞಾನಿ, ಲೇಖಕ, ಅಂಕಣಕಾರ ಹಾಗೂ ಸೆಂಟರ್ ಆಫ್ ಇಕೋಲಾಜಿಕಲ್ ಸೈನ್ಸ್​ನ ಸ್ಥಾಪಕ. ಇವರು ಪ್ರಧಾನಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿ ಮತ್ತು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ರಚಿಸಲಾದ ಪಶ್ಚಿಮಘಟ್ಟ ಪರಿಸರ ವಿಜ್ಞಾನಗಳ ಪರಿಣಿತರ ತಂಡದ ಮುಖ್ಯಸ್ಥರು ಕೂಡ ಆಗಿದ್ದರು.

ಮಾಧವ ಗಾಡ್ಗೀಳ್ 1942ರ ಮೇ 24ರಂದು ಪುಣೆಯಲ್ಲಿ ಜನಿಸಿದರು. ಗಾಡ್ಗೀಳ್ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಜೀವಶಾಸ್ತ್ರದ ಪದವಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರದ ಪದವಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

1971ರಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದ ಅವರು ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ 2 ವರ್ಷ ಕೆಲಸ ನಿರ್ವಹಿಸಿ, 1973ರಲ್ಲಿ ಬೆಂಗಳೂರಿನ ಐಐಎಸ್‌ಸಿ ಸೇರಿದರು. ಅಲ್ಲಿ 30 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ, 2004ರಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು.ಇದಲ್ಲದೆ ಗಾಡ್ಗೀಳ್‌ರವರು ಸ್ಟಾನ್ಡ್‌ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

1980ರ ದಶಕದಲ್ಲಿ ನೀಲಗಿರಿ ಅರಣ್ಯ ಪ್ರದೇಶವನ್ನು ಭಾರತದ ಮೊದಲ ಜೈವಿಕ ಅರಣ್ಯವನ್ನಾಗಿಸುವುದರಲ್ಲಿ ಗಾಡ್ಗೀಳ್‌ರವರ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸಿವೆ. 2002ರಲ್ಲಿ ಜೀವ ಸಂರಕ್ಷಣಾ ಕಾಯಿದೆಯ ಕರಡು ಸಮಿತಿ ಸದಸ್ಯರಾಗಿ ಗಾಡ್ಗೀಳ್‌ರವರು ಮಾಡಿದ ಶಿಫಾರಸ್ಸುಗಳನ್ನು ರಾಷ್ಟ್ರೀಯ ಜೀವ ಸಂರಕ್ಷಣಾ ಸಮಿತಿಯು ಅಂಗೀಕರಿಸಿದೆ.

ಕ್ರೀಡಾಪಟುವಾಗಿದ್ದ ಮಾಧವ ಗಾಡ್ಗೀಳ್ 1959 ಮತ್ತು 1961ರಲ್ಲಿ ಮಹಾರಾಷ್ಟ್ರ ಜ್ಯೂನಿಯರ್ ಮತ್ತು ಪುಣೆ ವಿಶ್ವವಿದ್ಯಾಲಯದ ಹೈಜಂಪ್‌ನಲ್ಲಿ ದಾಖಲೆ ನಿರ್ಮಿಸಿದ್ದರು. ಅವರು ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪುಣೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.

error: Content is protected !!
Scroll to Top