ಈ ಬಗ್ಗೆ ಮಹಾನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ಹೇಳಿದ್ದೇನು ಗೊತ್ತಾ?
ಹುಬ್ಬಳ್ಳಿ: ಪೊಲೀಸರು ಬಂಧಿಸಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ.
ಈ ಬಗ್ಗೆ ಮಾತನಾಡಿರುವ ಮಹಾನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪೊಲೀಸರು ಬಂಧಿತ ಬಿಜೆಪಿ ಕಾರ್ಯಕರ್ತೆ ಸುಜಾತಾ ಹುಂಡಿ ಅವರ ಬಟ್ಟೆ ಬಿಚ್ಚಿಸಿ, ಹಲ್ಲೆ ನಡೆಸಿಲ್ಲ. ಬದಲಾಗಿ ಪೊಲೀಸ್ ವ್ಯಾನಿನಲ್ಲಿ ಬಂಧಿಸಿ ಕರೆದೊಯ್ಯುವ ಸಂದರ್ಭದಲ್ಲಿ ಆಕೆಯೇ ಮಹಿಳಾ ಪೊಲೀಸ್ ಸಿಬ್ಬಂದಿ ಒಬ್ಬರ ಹೊಟ್ಟೆಗೆ ಕಚ್ಚಿ ಗಾಯಗೊಳಿಸಿದ್ದು ಮಾತ್ರವಲ್ಲದೆ, ಅವರನ್ನು ತಳ್ಳಿದ್ದಾರೆ. ಹಾಗೆಯೇ ವಾಹನದಲ್ಲಿ ಕುಳ್ಳಿರಿಸಿದಾಗ ಅವರೇ ತಮ್ಮ ಬಟ್ಟೆ ಬಿಚ್ಚಿಕೊಂಡು, ರಂಪಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಮೊದಲೂ ಸುಜಾತ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಐದು ಜನ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಕೇಶ್ವಾಪುರ ಠಾಣೆಯ ಮುಂದೆ ಕಾರ್ಯಕರ್ತೆಯನ್ನು ಬಂಧಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೂ ಮುಂದಾಗಿರುವುದಾಗಿದೆ.
























