ಆರೋಪಿಯ ಹೇಳಿಕೆಯಲ್ಲಿದೆ ಬುರುಡೆ ಷಡ್ಯಂತ್ರದ ಭಯಾನಕ ಸತ್ಯ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪಿಗಳು ಎಸ್ಐಟಿಗೆ ನೀಡಿದ ಹೇಳಿಕೆಯ ಕೆಲವು ಅಂಶಗಳು ಬಯಲಾಗಿದ್ದು, ಇದರಲ್ಲಿ ಯಾವ ರೀತಿ ಷಟ್ಯಂತ್ರ ರೂಪಿಸಲಾಗಿತ್ತು ಎಂಬುದರ ಬಗ್ಗೆ ಇಂಚಿಂಚು ಮಾಹಿತಿ ಇದೆ. ಬುರುಡೆ ನೋಡಿ ನಾನು ಹೆದರಿ ಹೋಗಿದ್ದೆ ಎಂದು ಬುರುಡೆ ಗ್ಯಾಂಗ್ನ ಸದಸ್ಯ, ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಜಯಂತ್ ಟಿ. ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ರೈಲಿನಲ್ಲಿ ದೆಹಲಿಗೆ ಜಯಂತ್ ಬುರುಡೆಯನ್ನು ತೆಗೆದುಕೊಂಡು ಹೋಗಿದ್ದರೆ, ವಿಮಾನದಲ್ಲಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್ ದೆಹಲಿಗೆ ತೆರಳಿದ್ದರು.
ದೆಹಲಿಯಲ್ಲಿ ರಾತ್ರಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಜೊತೆ ಮಲಗಿದ್ದಾಗ ಜಯಂತ್ ಟಿ.ಗೆ ಭಯಾನಕ ಕನಸು ಬಿದ್ದಿತ್ತಂತೆ. ಕೆಟ್ಟ ಕನಸು ಬಿದ್ದು ಕಿರುಚಿಕೊಂಡು ಜಯಂತ್ ಎದ್ದಿದ್ದ. ಕೆಟ್ಟ ಕನಸಿನಿಂದಾಗಿ ದೆಹಲಿಯಲ್ಲೇ ಬುರುಡೆಯನ್ನು ಬಿಟ್ಟು ಜಯಂತ್, ಮಟ್ಟಣ್ಣನವರ್, ಸುಜಾತ ಭಟ್ ಬೆಂಗಳೂರಿಗೆ ಮರಳಿದ್ದರು.
ರೈಲಿನಲ್ಲಿ ಬರುಡೆಯನ್ನು ತೆಗೆದುಕೊಂಡು ನಾನು ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿ ಸುಜಾತ ಭಟ್, ಗಿರೀಶ್ ಮಟ್ಟಣ್ಣನವರ್ ವಕೀಲರಾದ ಧನಂಜಯ್ ಬಳಿ ಮಾತನಾಡಿದರು. ನಾನು ವಕೀಲರನ್ನು ಭೇಟಿ ಮಾಡಿದ ನಂತರ ಶಾಂಗ್ರಿಲಾ ಹೋಟೆಲಿನಿಂದ ಕಾರಿನಲ್ಲಿ ವಿಠಲ ಮಂದಿರಕ್ಕೆ ಬಂದೆವು. ಕಾರಿನಿಂದ ಬುರುಡೆಯನ್ನು ನಾನೇ ತಂದು ಸುಜಾತ ಭಟ್ ರೂಮಿನಲ್ಲಿ ಇಟ್ಟೆನು. ಸುಜಾತ ಭಟ್ ಇದು ಏನು ಎಂದು ಕೇಳಿದಳು. ನಾನು ಏನಿಲ್ಲ ಬಿಡಿ ಎಂದು ಹೇಳಿ ಮಂಚದ ಹಿಂಬದಿಯಲ್ಲಿ ಅದನ್ನು ಇರಿಸಿದೆ. ಆ ದಿನ ರಾತ್ರಿ ಬುರುಡೆ ಸುಜಾತ ಭಟ್ ಕೋಣೆಯಲ್ಲಿ ಇತ್ತು. ನಾನು ಮಟ್ಟಣ್ಣನವರ್, ಚಿನ್ನಯ್ಯ ಒಂದು ರೂಮಿನಲ್ಲಿ ಮಲಗಿಕೊಂಡವು. ನನಗೆ ನಿದ್ದೆಯಲ್ಲಿ ಕಟ್ಟ ಕನಸು ಬಿದ್ದಿದ್ದು ನಾನು ಕಿರುಚಿಡಾಡಿದನು ಕನಸಿನಲ್ಲಿ ಕೆಟ್ಟ ಕಟ್ಟದು ಕಾಣುತ್ತಿತ್ತು ಎಂಬುದಾಗಿ ಜಯಂತ್ ಎಸ್ಐಟಿ ಮುಂದೆ ಹೇಳಿಕೊಂಡಿದ್ದಾನೆ.
ಮೇ 5ರಂದು ನಾವು 4 ಜನ ಬಾಡಿಗೆ ಕಾರು ಮಾಡಿಕೊಂಡು ಬುರುಡೆಯನ್ನು ತೆಗೆದುಕೊಂಡು ಸುಪ್ರೀಂಕೋರ್ಟ್ ಬಳಿ ವಕೀಲ ಕೆ.ವಿ ಧನಂಜಯ ಅವರನ್ನು ಭೇಟಿ ಮಾಡಲು ಹೋದೆವು. ಬುರುಡೆ ಕಾರಿನಲ್ಲೇ ಇತ್ತು. ದ್ವಾರದಲ್ಲಿ ನಮ್ಮನ್ನು ತಡೆದ ಕಾರಣ ಸುಪ್ರೀಂ ಕೋರ್ಟ್ ಒಳಗಡೆ ಹೋಗಲು ಸಾಧ್ಯವಾಗಲಿಲ್ಲ.
ಮತ್ತೆ ಧನಂಜಯ ಅವರ ವಕೀಲರು ಮಟ್ಟಣ್ಣನವರಿಗೆ ಫೋನ್ ಮಾಡಿ ಶಾಂಗ್ರೀಲಾ ಹೋಟೆಲ್ ಬಳಿ ಬರಲು ತಿಳಿಸಿದರು ಅದೇ ಕಾರಿನಲ್ಲಿ ನಾವು ಹೋಟೆಲಿಗೆ ಹೋದೆವು. ಬುರುಡೆಯನ್ನು ಕಾರಿನಲ್ಲಿಯೇ ಇಟ್ಟು, ಸುಜಾತ ಭಟ್ಳನ್ನು ಕಾರಿನಲ್ಲಿ ಬಿಟ್ಟು ನಾವು ಮೂವರು ಮೇಲೆ ಹೋದೆವು.
ಈ ಸಂರ್ಭದಲ್ಲಿ ಧನಂಜಯ್ ಯಾವುದೇ ಟೆನ್ಷನ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಇದು ಎಫ್ಐಆರ್ ಆಗಿದೆಯೇ ಎಂದು ನಮ್ಮನ್ನು ಕೇಳಿದ್ದಾರೆ. ನೀವು ವಾಪಸ್ ಹೋಗಿ ಧರ್ಮಸ್ಥಳದಲ್ಲಿ ಎಫ್ಐಆರ್ ಮಾಡಿಸಿ ಎಂದು ತಿಳಿಸಿದರು. ಆ ನಂತರ ನಾವು ಅದೇ ಕಾರಿನಲ್ಲಿ ವಾಪಸ್ ವಿಠಲ ಮಂದಿರಕ್ಕೆ ಬಂದೆವು. ನಾವು ಮೂವರು ವಿಮಾನದಲ್ಲಿ ಬೆಂಗಳೂರಿಗೆ ಹೋಗುತ್ತೇವೆ ನೀನು ರೈಲಿನಲ್ಲಿ ಬಾ ಎಂದು ಮಟ್ಟಣ್ಣನವರ್ ಹೇಳಿದ್ದರು. ಆದರೆ ನನಗೆ ನಿನ್ನೆ ಕೆಟ್ಟ ಕನಸು ಬಿದ್ದ ಕಾರಣ ನಾನು ರೈಲಿನಲ್ಲಿ ತರಲು ಸಾಧ್ಯವಿಲ್ಲ ಎಂದು ಹೇಳಿದೆ. ನಂತರ ಮಟ್ಟಣ್ಣನವರ್ ವಿಠಲ ಮಂದಿರ ಹುಡುಗರಿಗೆ ಹೇಳಿ ಈ ಬಾಕ್ಸ್ ಇಲ್ಲಿಯೇ ಇರಲಿ. ನಾವು ವಾಪಸ್ ಬಂದು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ ನಾವು ಬೆಂಗಳೂರಿಗೆ ವಾಪಸ್ ಆದೆವು.
ದೆಹಲಿಯಿಂದ ಬಂದ ಬಳಿಕ ಆಗಾಗ ಮಹೇಶ್ ತಿಮರೋಡಿ ಮನೆಯಲ್ಲಿ ನಾನು ಗಿರೀಶ್ ಮಟ್ಟಣನವರ್, ಪುರಂದರ ಗೌಡ, ವಿಠಲ ಗೌಡ, ಕುಸುಮಾವತಿ ಮುಂತಾದವರು ಪದೇ ಪದೇ ಭೇಟಿಯಾಗಿ ಸಭೆ ನಡೆಸುತ್ತಿದ್ದೆವು. ಧರ್ಮಸ್ಥಳದವರ ವಿರುದ್ಧ ಯಾವ ರೀತಿ ಸುಳ್ಳು ಕೇಸನ್ನು ಪೊಲೀಸ್ ಠಾಣೆಯಲ್ಲಿ ರಿಜಿಸ್ಟ್ರರ್ ಮಾಡಿಸಬೇಕೆಂದು ಚರ್ಚೆಯಾಗುತ್ತಿತ್ತು. ತಮಿಳುನಾಡಿನಿನಿಂದ ಚಿನ್ನಯ್ಯನನ್ನು ಕರೆಯಿಸಿ ಬುರುಡೆ ಕೊಟ್ಟು, ದೂರು ದಾಖಲಿಸುವುದು ಎಂದು ತೀರ್ಮಾನವಾಯಿತು.
ಮೇ 25ರಂದು ನಾನು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ತೆರಳಿದ್ದೆ. ವಿಠಲ ಮಂದಿರಕ್ಕೆ ಹೋಗಿ ರೈಲಿನಲ್ಲಿ ಬುರುಡೆಯನ್ನು ಮಂಗಳೂರಿಗೆ ತಂದೆ. ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಇಳಿದ ಬಳಿಕ ರಿಕ್ಷಾದಲ್ಲಿ ಜ್ಯೋತಿ ಸರ್ಕಲ್ ಬಳಿ ಇರುವ ತಮ್ಮಣ್ಣ ಶೆಟ್ಟಿಯ ಕಚೇರಿಗೆ ಹೋದೆ. ಅಲ್ಲಿ ಊಟ ಮುಗಿಸಿದ ಬಳಿಕ ಪ್ರಮೋದ್ ಶೆಟ್ಟಿಗೆ ಫೋನ್ ಮಾಡಿದೆ. ನಂತರ ಪ್ರಮೋದ್ ಶೆಟ್ಟಿಯೇ ಕ್ರೇಟಾ ಕಾರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ನನ್ನನ್ನು ಕರೆ ತಂದನು. ನಾನು ಈ ಬುರುಡೆಯನ್ನು ತಿಮರೋಡಿಗೆ ನೀಡಿದೆನು ಎಂಬುದಾಗಿ ಜಯಂತ್ ಎಸ್ಐಟಿಗೆ ತಿಳಿಸಿದ್ದಾನೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ.
























