ನವದೆಹಲಿ: ಭಾರತ ಮತ್ತು ಪಾಕ್ ನಡುವಿನ ಬಹುಕಾಲದ ಭಿನ್ನಾಭಿಪ್ರಾಯ ಮತ್ತೊಮ್ಮೆ ಜಾಗತಿಕ ವೇದಿಕೆಗೆ ಬಂದಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ‘ಶಾಂತಿಗಾಗಿ ನಾಯಕತ್ವ’ ಕುರಿತ ಮುಕ್ತ ಚರ್ಚೆಯಲ್ಲಿ ಭಾರತ ಈ ಬಗ್ಗೆ ಮಾತನಾಡಿದೆ.
ಪಾಕ್ ಪ್ರತಿನಿಧಿಯ ಹೇಳಿಕೆಗಳಿಗೆ ಭಾರತ ಪ್ರತಿಕ್ರಿಯೆ ನೀಡಿದ್ದು, ತನ್ನ ಸ್ಪಷ್ಟ ನಿಲುವನ್ನು ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಹೇಳಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪಿ. ಕಾಶ್ಮೀರ, ಲಡಾಕ್ ಭಾರತದ ಅವಿಭಾಜ್ಯ ಅಂಗ ಮತ್ತು ಅವುಗಳನ್ನು ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ. ಇತಿಹಾಸದಲ್ಲೂ ಇವು ಭಾರತದ ಭಾಗವಾಗಿದಾದು, ಇಂದು ಮತ್ತು ಮುಂದೆಯೂ ಭಾರತದ ಭಾಗವಾಗಿಯೇ ಇರಲಿವೆ ಎಂದು ಘೋಷಿಸಿದ್ದಾರೆ.
ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಭಾರತದ ವಿಚಾರವನ್ನೆತ್ತಿ ತಾನು ಭಾರತ ವಿರೋಧಿ ಎಂಬ ಅಜೆಂಡಾವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.
ಭಯೋತ್ಪಾದನಾ ವಿಷಯದಲ್ಲಿ ಭಾರತ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಪಾಕಿಸ್ತಾನ ಪ್ರಾಯೋಜಕತ್ವದ ಉಗ್ರರಿಂದ ಹಲವಾರು ಭಾರತೀಯರು ಕಳೆದ ಹಲವು ವರ್ಷಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ಪಾಕ್ ದುರುಪಯೋಗ ಮಾಡಿದೆ ಎಂದು ಅವರು ಹೇಳಿದ್ದಾರೆ.
























