ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ. 6 ರಂದು ಅಂಗಾರಕ ಸಂಕಷ್ಟ ಚತುರ್ಥಿಯ ಪ್ರಯುಕ್ತ 108 ಕಾಯಿ ಗಣಪತಿ ಹೋಮ, ಸಂಜೆ 6 ಗಂಟೆಗೆ ಬಾಲಗಣಪತಿಗೆ ಮೂಡಪ್ಪ ಸೇವೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಆ ಪ್ರಯುಕ್ತ ಸಿದ್ಧಪಡಿಸಲಾದ ಸೇವಾ ರಶೀದಿ ಪುಸ್ತಕವನ್ನು ಡಿ. 15 ರಂದು ಶ್ರೀ ಮಹಾಲಿಂಗೇಶ್ವರ ಮತ್ತು ಗಣಪತಿ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಸುಮಾರು ಏಳು ವರ್ಷಗಳ ಹಿಂದೆ ಸುಧಾಕರ ಶೆಟ್ಟಿ ಅವರು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದೇವಾಲಯದಲ್ಲಿ ಮೂಡಪ್ಪ ಸೇವೆ ನಡೆದಿತ್ತು. ಈಗ ಅರ್ಚಕರು ಮತ್ತು ಭಕ್ತರ ಸಲಹೆ, ಬೇಡಿಕೆಗಳನ್ನು ಪರಿಗಣಿಸಿ ಮಹಾಗಣಪತಿ ದೇವರಿಗೆ ಈ ಸೇವೆ ಸಮರ್ಪಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದ್ದಾರೆ.
























