ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ, ಪೆರ್ನೆ ವಲಯದ ಕೆದಿಲ ‘ಬಿ’ ಕಾರ್ಯಕ್ಷೇತ್ರದ ಒಕ್ಕೂಟೋತ್ಸವ ಕಾರ್ಯಕ್ರಮವನ್ನು ಕೆದಿಲ ಶ್ರೀ ದೇವಿ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನಾಕ್ಷಿ ಕೊಳಚಪ್ಪು (ಒಕ್ಕೂಟದ ಅಧ್ಯಕ್ಷರು) ವಹಿಸಿದ್ದರು.
ಜೆ. ಕೃಷ್ಣ ಭಟ್ ಮೀರಾವನ (ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರರು) ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಶ್ರೀ ಕ್ಷೇತ್ರವು ಲಕ್ಷಾಂತರ ಬಡಕುಟುಂಬಗಳಿಗೆ ಬೆಳಕಾಗಿದ್ದು ಸಂಘಗಳ ಸದಸ್ಯರು ಯೋಜನೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿನ್ನೆಲೆ ಹಾಗೂ ಒಕ್ಕೂಟದ ಬಲವರ್ಧನೆ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಸಪಲ್ಯ ವಾಲ್ತಾಜೆ, ವಸಂತ ಭಟ್ (ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನ ಆಡಳಿತ ಮಂಡಳಿ ಟ್ರಸ್ಟಿ), ಗೋಪಾಲ ಕೃಷ್ಣ ಭಟ್ ವಳಂಗಜೆ (ನಿವೃತ್ತ ಮುಖ್ಯ ಶಿಕ್ಷಕರು), ರಘು ಅಜಿಲ ಮಿತ್ತಿಲ, ವೆಂಕಪ್ಪ ಗೌಡ ಕೊಳಚಪ್ಪು (ಧರ್ಮ ಶ್ರೀ ವಿಶ್ವಸ್ಥ ಮಂಡಳಿ), ಜಗದೀಶ್ ಶೆಟ್ಟಿ (ಮಾಜಿ ಪುರಸಭಾ ಸದಸ್ಯ), ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು (ಜನಜಾಗೃತಿ ವೇದಿಕೆ ಸದಸ್ಯ), ದೀಪಕ್ ಆನಡ್ಕ (ಅಧ್ಯಕ್ಷರು ಶ್ರೀ ಕೃಷ್ಣ ಭಜನಾ ಮಂದಿರ), ಲೋಕಯ್ಯ ಪೂಜಾರಿ, ಸುರೇಶ್ ನೂಜೆ (ತಾಲೂಕು ಶೌರ್ಯ ಕ್ಯಾಪ್ಟನ್) ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾದರಿ ಸ್ವ ಸಹಾಯ ಸಂಘಗಳು, ನಿಕಟಪೂರ್ವ ಒಕ್ಕೂಟದ ಅಧ್ಯಕ್ಷರು, ಹಿರಿಯ ಫಲಾನುಭವಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ಘಟಕದ ಸ್ವಯಂ ಸೇವಕರು, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಹಿಂದೆ ಸೇವೆ ಸಲ್ಲಿಸಿದ ಸೇವಾಪ್ರತಿನಿಧಿಗಳನ್ನು ಗುರುತಿಸಿ ಗೌರವಿಸಲಾಯಿತು.
ನಿಕಟಪೂರ್ವ ಒಕ್ಕೂಟದ ಅಧ್ಯಕ್ಷರು ಮತ್ತು ಹಾಲಿ ಪದಾಧಿಕಾರಿಗಳಾದ ಈಶ್ವರ ಗೌಡ, ಚೆನ್ನಪ್ಪ ಕುಲಾಲ್, ಗಿರೀಶ್ ಕುಮಾರ್, ವೆಂಕಪ್ಪ , ಜಗದೀಶ, ಸುಂದರ, ಚಂದ್ರಶೇಖರ, ಜನಾರ್ಧನ ಹಾಗೂ ಒಕ್ಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಕೇಂದ್ರದ ಸದಸ್ಯರ ಕುಣಿತ ಭಜನೆ ಮತ್ತು ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಲಯ ಮೇಲ್ವಿಚಾರಕಿ ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇವತಿಯವರು 20 ವರ್ಷಗಳ ಯೋಜನೆಯ ಸೇವಾನುಭವದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸೇವಾ ಪ್ರತಿನಿಧಿ ಜಯಂತಿ ವರದಿ ಮಂಡನೆ ಮಾಡಿದರು. ಪ್ರತಿಭಾ ಸ್ವಾಗತಿಸಿದರು. ರಮ್ಲತ್ ಧನ್ಯವಾದ ಸಮರ್ಪಿಸಿದರು. ಕೇಶವ ಕಾರ್ಯಕ್ರಮ ನಿರೂಪಿಸಿದರು.
























