ಜೈಲಿನಲ್ಲಿರುವ ಉಗ್ರನಿಗೆ ಡಾಕ್ಟರ್ ಟೆರರ್ಗಳ ಜೊತೆ ಸಂಪರ್ಕದ ಅನುಮಾನ
ಬೆಂಗಳೂರು : ದೆಹಲಿ ಕಾರು ಬಾಂಬ್ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ತಂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಫೋಟಕ್ಕೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಮೊಬೈಲ್ ಬಳಕೆ ಮಾಡಿರುವುದಕ್ಕೂ ಸಂಬಂಧ ಇದೆಯಾ ಎಂಬ ಅನುಮಾನ ಮೂಡಿದೆ. ಈಗಾಗಲೇ ಎನ್ಐಎ ದೇಶದ ಹಲವು ಕಡೆ ದಾಳಿಯನ್ನು ನಡೆಸಿ, ಹಲವು ದಾಖಲೆಗಳು ವಶಪಡಿಸಿಕೊಂಡ ತನಿಖೆ ನಡೆಸುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರರು ಹಾಗೂ ರೌಡಿಶೀಟರ್ಗಳು ಮೊಬೈಲ್ ಉಪಯೋಗಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಜುಹಾದ್ ಹಮೀದ್ ಶಕೀಲ್ ಮನ್ನಾ ಎಂಬ ಉಗ್ರನ ಕೈಯಲ್ಲಿ ಮೊಬೈಲ್ ಇರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎನ್ಐಎ ಅಧಿಕಾರಿಗಳು ಬೆಂಗಳೂರು ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ತನಿಖೆಯ ಸ್ವಲ್ಪ ಸಮಯದ ನಂತರ ದೆಹಲಿಯಲ್ಲಿ ಕಾರು ಬ್ಲಾಸ್ಟ್ ಆಗಿದೆ. ಇದೀಗ ಬೆಂಗಳೂರು ಜೈಲಿನಲ್ಲಿರುವ ಉಗ್ರನಿಗೂ ದೆಹಲಿ ಬ್ಲಾಸ್ಟ್ಗೂ ಸಂಬಂಧ ಇರಬಹುದು ಎಂಬ ಅನುಮಾನ ಶುರುವಾಗಿದೆ. ಈ ಬ್ಲಾಸ್ಟ್ಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾಗೂ ಲಿಂಕ್ ಇದೆಯಾ ಎಂಬ ಅನುಮಾನುಗಳು ಹುಟ್ಟಿಕೊಂಡಿದೆ. ಈ ಕಾರಣಕ್ಕೆ ಎನ್ಐಎ ಇದೀಗ ಮತ್ತೊಮ್ಮೆ ಜೈಲಿಗೆ ಭೇಟಿ ನೀಡಿದೆ.
ಎನ್ಐಎ ತಂಡ ಈಗಾಗಲೇ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಈ ವೇಳೆ ಜುಹಾದ್ ಹಮೀದ್ ಶಕೀಲ್ ಮನ್ನಾ ವಿಚಾರಣೆಯನ್ನು ಕೂಡ ಎನ್ಐಎ ಅಧಿಕಾರಿಗಳು ನಡೆಸಿದ್ದಾರೆ. ಅಧಿಕಾರಿಗಳು ಈಗಾಗಲೇ ಹಲವು ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ಪಡೆದುಕೊಂಡು, ಈ ಉಗ್ರ ಜೈಲಿನಲ್ಲಿದ್ದುಕೊಂಡು ಯಾರನ್ನೆಲ್ಲ ಸಂಪರ್ಕಿಸಿದ್ದಾನೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜತೆಗೆ ದೆಹಲಿ ಬ್ಲಾಸ್ಟ್ ಬಗ್ಗೆಯೂ ಅಧಿಕಾರಿಗಳು ಜುಹಾದ್ ಹಮೀದ್ ಶಕೀಲ್ ಮನ್ನಾ ಬಳಿ ಕೇಳಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳು ಸಿಗುತ್ತಿದೆ ಎಂಬ ಆರೋಪ ಕೂಡ ಬಂದಿತ್ತು. ಈ ಬೆನ್ನಲ್ಲೇ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಮೊಬೈಲ್ ಬಳಸಿರುವ ವಿಡಿಯೋ ವೈರಲ್ ಆಗಿತ್ತು. ಈತ ಯುವಕರನ್ನು ಐಸಿಸ್ ಉಗ್ರ ಸಂಘಟನೆಗೆ ನೇಮಕ ಮಾಡುತ್ತಿದ್ದ ಎಂಬ ಆರೋಪ ಇತ್ತು.
ದೆಹಲಿಯ ಕೆಂಪುಕೋಟೆ ಸಮೀಪದ ನಡೆದ ಕಾರು ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿ ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ಹಿಂದಿರುವ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಇದೊಂದು ಭಯೋತ್ಪಾದಕ ದಾಳಿ ಎಂದು ಹೇಳಲಾಗಿದೆ.
























