ಬಿಜೆಪಿ ಹುದ್ದೆಯಿಂದ ಪುತ್ತಿಲ ಪರಿವಾರದವರಿಗೆ ಕೊಕ್‌

ಪುತ್ತೂರು ರಾಜಕೀಯದಲ್ಲಿ ಕುತೂಹಲ ಕೆರಳಿಸಿದ ದಿಢೀರ್‌ ಬೆಳವಣಿಗೆ

ಪುತ್ತೂರು: ಪುತ್ತೂರಿನ ಗ್ರಾಮಾಂತರ ಮತ್ತು ನಗರ ಮಂಡಲಗಳನ್ನು ಐಕ್ಯಗೊಳಿಸಿ ಅಖಂಡ ಪುತ್ತೂರು ಮಂಡಲ ರಚಿಸಿ ನನನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಪುತ್ತೂರಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದು ಪುತ್ತಿಲ ಪರಿವಾರದ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮುಂದಿಟ್ಟಿದ್ದ ಬೇಡಿಕೆಯನ್ನು ಜಿಲ್ಲಾ ಬಿಜೆಪಿ ನಿರಾಕರಿಸಿದ ಬೆನ್ನಲ್ಲೇ, ಇದೀಗ ಪುತ್ತಿಲ ಪರಿವಾರಕ್ಕೆ ಮತ್ತೊಂದು ಶಾಕ್‌ ನೀಡಿದೆ. ಪುತ್ತಿಲ ಪರಿವಾರದಿಂದ ಬಿಜೆಪಿ ಪದಾಧಿಕಾರಿ ಹುದ್ದೆಗೆ ಸ್ಥಳಾಂತರಗೊಂಡಿದ್ದ ಮೂವರನ್ನು ಆ ಹುದ್ದೆಗಳಿಂದ ವಿಮುಕ್ತಿಗೊಳಿಸಿ ಆ ಸ್ಥಾನಕ್ಕೆ ಪಕ್ಷದಲ್ಲಿ ಸಕ್ರಿಯರಾಗಿರುವವರನ್ನು ನೇಮಿಸಲಾಗಿದೆ.

ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್‌ ಕೋಡಿಬೈಲು ಮತ್ತು ಪ್ರಶಾಂತ್‌ ನೆಕ್ಕಿಲಾಡಿ ಅವರನ್ನು ಈ ಹುದ್ದೆಯಿಂದ ತೆರವು ಮಾಡಲಾಗಿದ್ದು, ಸುನಿಲ್‌ ದಡ್ಡು ಮತ್ತು ಲೋಕೇಶ್‌ ಚಾಕೋಟೆ ಅವರನ್ನು ನೇಮಿಸಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಆದೇಶ ಹೊರಡಿಸಿದ್ದಾರೆ. ಉಮೇಶ್‌ ಕೋಡಿಬೈಲು ಮತ್ತು ಪ್ರಶಾಂತ್‌ ನೆಕ್ಕಿಲಾಡಿ ಇಬ್ಬರೂ ಪುತ್ತಿಲರ ಕಟ್ಟಾ ಬೆಂಬಲಿಗರಾಗಿದ್ದು, ವರ್ಷದ ಹಿಂದೆ ಪಕ್ಷದ ಜವಾಬ್ದಾರಿ ನೀಡಲಾಗಿತ್ತು.





















































 
 

ಪುತ್ತೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್‌ ತೆಂಕಿಲ ಮತ್ತು ನಾಗೇಶ್‌ ಪ್ರಭು ಅವರನ್ನು ಪದಾಧಿಕಾರಿ ಹುದ್ದೆಯಿಂದ ತೆರವುಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಯುವರಾಜ್‌ ಪೆರಿಯತ್ತೋಡಿ ಮತ್ತು ಶಶಿಧರ ನಾಯಕ್‌ ಅವರನ್ನು ನೇಮಿಸಿ ನಗರ ಮಂಡಲ ಅಧ್ಯಕ್ಷ ಪಿ.ಬಿ. ಶಿವಕುಮಾರ್‌ ಕಲ್ಲಿಮಾರ್‌ ಆದೇಶ ಹೊರಡಿಸಿದ್ದಾರೆ. ನಾಗೇಶ್‌ ಪ್ರಭು ಬಿಜೆಪಿ ಪರಿವಾರದದವರಾಗಿದ್ದು, ವೈಯಕ್ತಿಕ ಕಾರಣಕ್ಕೆ ಹುದ್ದೆಯ ಹೊಣೆಯಿಂದ ದೂರವಿದ್ದರು. ಅನಿಲ್‌ ತೆಂಕಿಲ ಅವರು ಪುತ್ತಿಲ ಬೆಂಬಲಿಗರಾಗಿದ್ದು, ವರ್ಷದ ಹಿಂದೆ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು.

ಉಮೇಶ್‌ ಗೌಡ ಕೋಡಿಬೈಲು, ಪ್ರಶಾಂತ್‌ ನೆಕ್ಕಿಲಾಡಿ ಮತ್ತು ಅನಿಲ್‌ ತೆಂಕಿಲ ನಾಲ್ಕೈದು ತಿಂಗಳುಗಳಿಂದ ಬಿಜೆಪಿ ಚಟುವಟಿಕೆಯಿಂದ ಸಂಪೂರ್ಣ ದೂರವಾಗಿದ್ದರು. ಪಕ್ಷದ ಸಭೆಗಳಿಗೆ ಗೈರು ಹಾಜರಾಗುತ್ತಿದ್ದರು. ಪ್ರಧಾನ ಕಾರ್ಯದರ್ಶಿಗಳಾದರೂ ಯಾವುದೇ ಹೊಣೆಗಾರಿಕೆ ವಹಿಸುತ್ತಿರಲಿಲ್ಲ. ನಿಷ್ಕ್ರಿಯತೆಯ ಕಾರಣ ನೀಡಿ ಹುದ್ದೆಯಿಂದ ತೆರವು ಮಾಡಿ ಪಕ್ಷ ತೀರ್ಮಾನ ಕೈಗೊಂಡಿದೆ. ಹೊಸದಾಗಿ ನೇಮಕಗೊಂಡ ನಾಲ್ವರು ಪ್ರಧಾನ ಕಾರ್ಯದರ್ಶಿಗಳು ಉಭಯ ಮಂಡಲಾಧ್ಯಕ್ಷರ ಇನ್ನುಳಿದ ಅವಧಿಯುದ್ದಕ್ಕೂ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ಪುತ್ತಿಲ ಪರಿವಾರದ ಮೊದಲ ಅಧ್ಯಕ್ಷರೂ, ಅರುಣ್‌ ಪುತ್ತಿಲ ಅವರ ಆಪ್ತರೂ ಆದ ಪ್ರಸನ್ನ ಕುಮಾರ್‌ ಮಾರ್ತ ಅವರನ್ನು ವರ್ಷದ ಹಿಂದೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಿಸಲಾಗಿದ್ದು, ಪಕ್ಷದ ಜವಾಬ್ದಾರಿ ನಿರ್ವಹಿಸುತ್ತಿರುವ ಕಾರಣ ಅವರನ್ನು ಮುಂದುವರಿಸಲಾಗಿದೆ. ಮಾರ್ತ ಏಕಕಾಲದಲ್ಲಿ ಪುತ್ತಿಲ ಪರಿವಾರ ಮತ್ತು ಬಿಜೆಪಿ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ನಾಗೇಶ್‌ ಪ್ರಭು ವೈಯಕ್ತಿಕ ಕಾರಣ ತಿಳಿಸಿ ಚಟುವಟಿಕೆಯಿಂದ ದೂರವಿದ್ದರು. ಇತರ ಮೂವರು ಕಾರಣ ನೀಡದೆ ನಿರಂತರ ಜವಾಬ್ದಾರಿಯಿಂದ ದೂರವುಳಿದಿದ್ದಾರೆ. ಪಕ್ಷದ ಚಟುವಟಿಕೆ ಮುಂದುವರಿಯಬೇಕು. ಹೀಗಾಗಿ ಅವರನ್ನು ತೆರವು ಮಾಡಿ ಹೊಸ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಸಂಘಟನಾತ್ಮಕ ದೃಷ್ಟಿಯಿಂದ ಇದು ಅನಿವಾರ್ಯ ಕ್ರಮ. ಇದು ಯಾರ ವಿರುದ್ಧವೂ ಕೈಗೊಂಡ ಕ್ರಮವಲ್ಲ ಎಂದು ದಯಾನಂದ ಶೆಟ್ಟಿ ಉಜಿರೆಮಾರ್‌ ಹೇಳಿದ್ದಾರೆ.

ಖುದ್ದು ಅರುಣ್‌ ಪುತ್ತಿಲ ಅವರೇ ತನಗೆ ಅಖಂಡ ಪುತ್ತೂರು ಮಂಡಲದ ಅಧ್ಯಕ್ಷತೆ ಕೊಡುವಂತೆ ಮೊದಲ ಬಾರಿ ಬಹಿರಂಗ ಬೇಡಿಕೆ ಇಟ್ಟ ಕೆಲವೇ ದಿನಗಳಲ್ಲಿ, ಇದ್ದ ಪರಿವಾರದ ಪದಾಧಿಕಾರಿಗಳನ್ನೂ ಪಕ್ಷ ಹೊರದಬ್ಬುವ ಮೂಲಕ ಪುತ್ತಿಲ ಪರಿವಾರಕ್ಕೆ ಪಕ್ಷ ಹೊಸ ಸಂದೇಶ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಪುತ್ತಿಲ ವಿಚಾರದಲ್ಲಿ ಬಿಜೆಪಿ ಇನ್ನಷ್ಟು ಕಠಿಣ ಧೋರಣೆ ತಳೆಯುತ್ತದೆಯೇ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.

ಮುಂದಿನ ಚುನಾವಣೆಯಲ್ಲಿಯೂ ಅವಕಾಶ ನೀಡದಿದ್ದರೆ ಪುತ್ತಿಲ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಅಭಿಮಾನಿಗಳ ಅಭಿಯಾನ ಆರಂಭಗೊಂಡ ಬೆನ್ನಲ್ಲೇ ಇದೀಗ ಪುತ್ತಿಲ ನಿಷ್ಠರಿಗೆ ಬಿಜೆಪಿ ಅರ್ಧಚಂದ್ರ ಪ್ರಯೋಗಿಸಿದ್ದು ಹೊಸ ಬೆಳವಣಿಗೆಯಾಗಿದೆ. ಪುತ್ತಿಲ ನೇತೃತ್ವದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಹಿಂದವೀ ಸಾಮ್ರಾಜ್ಯೋತ್ಸವಕ್ಕೆ 2 ದಿನಗಳಿರುವಂತೆ ಬಿಜೆಪಿ ಕೈಗೊಂಡ ನಿರ್ಣಯದ ಹಿಂದಿನ ಸಂದೇಶದ ಬಗ್ಗೆ ಚರ್ಚೆಯಾಗುತ್ತಿದೆ.

error: Content is protected !!
Scroll to Top