ಚಿತ್ತಾಪುರದಲ್ಲಿ ನಡೆದ ಪ್ರಕರಣದಲ್ಲಿ ಸರ್ಕಾರಕ್ಕೆ ಹಿನ್ನಡೆ
ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ 2019ರ ಆಗಸ್ಟ್ನಲ್ಲಿ ನಡೆದಿದ್ದ ಪೊಲೀಸರ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣವನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಚಿವ ಸಂಪುಟದ ನಿರ್ಧಾರಕ್ಕೆ ಹೈಕೋರ್ಟ್ನ ಕಲಬುರಗಿ ವಿಭಾಗೀಯ ಪೀಠ ತಾತ್ಕಾಲಿಕ ತಡೆ ನೀಡಿ ಆದೇಶಿಸಿದೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಗಿರೀಶ್ ಭಾರದ್ಚಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದೆ.
2019ರ ಆಗಸ್ಟ್ನಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವು ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿ ಪೊಲೀಸರು ಸೀಜ್ ಮಾಡಿದ್ದರು. ಚಿತ್ತಾಪುರ ಪಟ್ಟಣದ ದಿಗ್ಗಾಂವ ಕ್ರಾಸ್ ಹತ್ತಿರದ ಚೆಕ್ಪೋಸ್ಟ್ ಬಳಿ ಘಟನೆ ನಡೆದಿತ್ತು. ಆದರೆ ವಾಹನ ಬಿಡುವಂತೆ ಚಿತ್ತಾಪುರ ಪಟ್ಟಣದ ಶೇಖ್ ಮೋಸೀನ್, ಮಹಮ್ಮದ ಫಯಾಜ್, ಮಹಮ್ಮದ ಯೂಸಫ್, ಇಮ್ರಾನ್, ನೂರ್ ಮಹಮ್ಮದ್ ಆಸೀಫ್, ಮಹಮ್ಮದ್ ಝಾಕೀರ್, ಮಹಮ್ಮದ ವಾಜೀದ್, ಮುಜಾಹೀದ್, ಮಹಮ್ಮದ್ ಖಲೀಲ್, ಇಕ್ಬಾಲ್, ರಿಯಾಜ್, ಫಾರೂಖ್, ಬಾಬಾ ಸೌದಾಗಾರ್ ಸೇರಿ 15-20 ಜನರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಜೊತೆ ವಾಗ್ವಾದ ನಡೆಸಿದ್ದರು.
ಈ ಬಗ್ಗೆ ವಿಚಾರಣೆ ಮಾಡಿ ಕಾನೂನು ಕ್ರಮ ಕೈಕೊಳ್ಳಲಾಗುವುದು. ನೀವೆಲ್ಲರೂ ಇಲ್ಲಿಂದ ಹೋಗಿ ಎಂದು ಪೊಲೀಸರು ಪದೇ ಪದೆ ಹೇಳಿದರೂ ಆರೋಪಿಗಳು ಅದನ್ನು ಲೆಕ್ಕಿಸದೆ ತಮ್ಮ ವಾಹನ ಬಿಡುವಂತೆ ಪಟ್ಟು ಹಿಡಿದಿದ್ದರು. ಬಳಿಕ ಪೊಲೀಸ್ ಠಾಣೆಯ ಮುಂಭಾಗದಿಂದ ಬಸೀರ್ ಗಂಜ್ ಚೌಕ್ ಕಡೆಗೆ ಹೋಗಿ ಕಲ್ಲು ತೂರಾಟ ಮಾಡಿದ್ದರು.
ಕಲ್ಲು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಅಭಿಜಿತ್ ಅವರ ಕಾರಿಗೆ ತಾಗಿ ಹಾನಿಯಾಗಿತ್ತು. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದಲ್ಲದೆ ಕಲ್ಲು ತೂರಾಟ ನಡೆಸಿ ವಾಹನ ಜಖಂಗೊಳಿಸಿದ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಕೇಸನ್ನು ರಾಜ್ಯ ಸರ್ಕಾರ ಈ ವರ್ಷ ಸೆಪ್ಟೆಂಬರ್ನಲ್ಲಿ ವಾಪಸ್ ಪಡೆದಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ ಗಿರೀಶ್ ಭಾರದ್ಚಜ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಆದೇಶಕ್ಕೆ ಸದ್ಯ ತಡೆ ನೀಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ನಿಗದಿಪಡಿಸಿದೆ.
























