25 ಸ್ಥಳಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ತೀವ್ರ ಶೋಧ
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ 13 ಮಂದಿಯ ಸಾವಿಗೆ ಕಾರಣವಾದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಂಕಿತ ಉಗ್ರರ ಜೊತೆಗಿನ ಸಂಬಂಧ ಹೊಂದಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರದ ಕುರಿತ ತನಿಖೆಯನ್ನು ಜಾರಿ ನಿರ್ದೇಶನಾಲಯ ತೀವ್ರಗೊಳಿಸಿದ್ದು, ವಿವಿಯ ಕಚೇರಿ ಸೇರಿ 25 ಸ್ಥಳಗಳ ಮೇಲೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ತೀವ್ರ ಶೋಧ ನಡೆಸುತ್ತಿದೆ.
ಫರಿದಾಬಾದ್ನಲ್ಲಿರುವ 70 ಎಕರೆ ವಿಸ್ತೀರ್ಣದ ವಿಶ್ವವಿದ್ಯಾಲಯದ ಓಖ್ಲಾ ಕಚೇರಿಯ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.
ನ.10ರಂದು ನಡೆಸಿದ ಸ್ಫೋಟದ ಪಿತೂರಿಯನ್ನು ಅದೇ ವಿವಿಯಲ್ಲಿ ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಲ್ ಫಲಾಹ್ ವಿಶ್ವವಿದ್ಯಾಲಯದ ಖಾತೆಗಳ ಹಣಕಾಸು ಕುರಿತು ತನಿಖೆಗೆ ಆದೇಶಿಸಿತ್ತು. ಜೊತೆಗೆ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವಿವಿಯ ಕಾರ್ಯನಿರ್ವಹಣೆಯನ್ನೂ ಪರಿಶೀಲಿಸುವಂತೆ ಸೂಚನೆ ನೀಡಿತ್ತು.
ದೆಹಲಿ-ಹರಿಯಾಣ ಗಡಿಯಿಂದ ಸುಮಾರು 27 ಕಿಮೀ ದೂರದಲ್ಲಿರುವ 70 ಎಕರೆಗಳಷ್ಟು ವಿಸ್ತಾರವಾದ ಅಲ್ ಫಲಾಹ್ ವಿಶ್ವವಿದ್ಯಾಲಯ ಒಂದು ಖಾಸಗಿ ಸಂಸ್ಥೆಯಾಗಿದೆ. ದೆಹಲಿಯಲ್ಲಿ ಸ್ಫೋಟಗೊಂಡ ಹುಂಡೈ ಐ20 ಕಾರಿನ ಚಾಲಕ ಮೃತ ಡಾ.ಉಮರ್ ಮೊಹಮ್ಮದ್ ಇದೇ ವಿವಿಯಲ್ಲಿ ವೈದ್ಯನಾಗಿದ್ದ. ಜೊತೆಗೆ, ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಡಾ.ಶಾಹೀನ್ ಸಯೀದ್, ಡಾ.ಆದಿಲ್ ರಾಥರ್ ಮತ್ತು ಡಾ.ಮುಜಮ್ಮಿಲ್ ಶಕೀಲ್ ಈ ವಿಶ್ವವಿದ್ಯಾಲಯದವರೇ ಆಗಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಡಾ.ಮುಜಮ್ಮಿಲ್ ಶಕೀಲ್ ಕೊಠಡಿಯಿಂದ ಅಪರಾಧ ಸಾಬೀತು ಪಡಿಸುವ ವಸ್ತುಗಳನ್ನು ಪತ್ತೆ ಹೆಚ್ಚಿದ್ದು, ಅದರಲ್ಲಿ ಇಬ್ಬರು ವೈದ್ಯರ ಡೈರಿಗಳಲ್ಲಿ ಕೋಡ್ ಇರುವ ಸಂದೇಶಗಳಿರುವುದು ಪತ್ತೆಯಾಗಿದೆ. ಶಂಕಿತ ಉಗ್ರರು ತಮ್ಮ ಭಯೋತ್ಪಾದಕ ಯೋಜನೆಗಳ ಕುರಿತು ಚರ್ಚಿಸಲು ವಿಶ್ವವಿದ್ಯಾಲಯದಲ್ಲಿರುವ ಡಾ. ಮುಜಮ್ಮಿಲ್ನ ಕೋಣೆಯಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ.
ಬಾಂಬ್ ತಯಾರಿಕೆಯಲ್ಲಿ ಬಳಸಲು ವಿಶ್ವವಿದ್ಯಾಲಯದ ಪ್ರಯೋಗಾಲಯದಿಂದ ಕೆಲವು ರಾಸಾಯನಿಕಗಳನ್ನೂ ಕಳ್ಳಸಾಗಣೆ ಮಾಡಿದ್ದರು ಎನ್ನಲಾಗಿದೆ. ಈ ಎಲ್ಲ ಆರೋಪ ಬೆನ್ನಲ್ಲೇ ಇಡಿ ಅಧಿಕಾರಿಗಲು ವಿವಿಯ ಕಚೇರಿ ಮೇಲೆ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದೆ.
























