11 ಜನರನ್ನು ಬಲಿತೆಗೆದುಕೊಂಡ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಕೆ
ನವದೆಹಲಿ: ದೆಹಲಿಯ ಕೆಂಪುಕೋಟೆಯ ಬಳಿ ಇರುವ ಮೆಟ್ರೋ ಸ್ಟೇಷನ್ ಗೇಟ್ ಬಳಿ ಟ್ರಾಫಿಕ್ ಸಿಗ್ನಲ್ನಲ್ಲಿ ನಿನ್ನೆ ಸಂಜೆ ಸಂಭವಿಸಿದ ಕಾರು ಸ್ಫೋಟ ಉಗ್ರರ ಆತ್ಮಹತ್ಯಾ ದಾಳಿ ಎಂಬ ತೀರ್ಮಾನಕ್ಕೆ ತನಿಖಾ ಏಜೆನ್ಸಿಗಳು ಬಂದಿವೆ. ಕಾರಿನಲ್ಲಿ ಅಮೋನಿಯಂ ನೈಟ್ರೇಟ್ ಸ್ಫೋಟಕದ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದು ಉಗ್ರಕೃತ್ಯ ಎಂಬ ಬಲವಾದ ಸಂಶಯ ಇದೆ. ಸ್ಫೋಟವಾದ ಕಾರಿನಲ್ಲೂ ಜನರಿದ್ದರು. ಕಾರೊಳಗಿದ್ದ ಜನರು ಸೇರಿದಂತೆ ಒಟ್ಟು 11 ಜನರು ಮೃತಪಟ್ಟಿದ್ದಾರೆ. 4 ಕಾರುಗಳು ಸುಟ್ಟು ಕರಕಲಾಗಿವೆ. 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯಾ ದಾಳಿ ಎಂಬಂತೆ ಕಂಡುಬರುತ್ತಿದೆ ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ 6.55ಕ್ಕೆ i20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಇದರ ಪರಿಣಾಮದಿಂದ ಆ ಕಾರಿನ ಹತ್ತಿರದ ಹಲವಾರು ವಾಹನಗಳಿಗೆ ಹಾನಿಯಾಗಿದೆ.
ಕಾರು ಸ್ಫೋಟವಾಗಿ 11 ಜನರು ಮೃತಪಟ್ಟಿದ್ದಾರೆ. 16ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ರಸ್ತೆಯಲ್ಲೆಲ್ಲ ಮೃತದೇಹದ ತುಂಡುಗಳು ಬಿದ್ದಿರುವುದು ಈ ಸ್ಫೋಟದ ಭೀಕರತೆಯನ್ನು ತೆರೆದಿಡುತ್ತಿದೆ.
ಘಟನೆಯಲ್ಲಿ ಫಿದಾಯಿನ್ ದಾಳಿಯ ಸಾಮ್ಯತೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕಾರನ್ನು ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಗಿದೆ ಎಂಬ ಬಲವಾದ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕಾರನ್ನು ಕಾಶ್ಮೀರದ ಪುಲ್ವಾಮದ ತಾರಿಕ್ ಎಂದು ಗುರುತಿಸಲಾದ ವ್ಯಕ್ತಿ ಖರೀದಿಸಿದ್ದ. ಅವನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಹರಿಯಾಣದ ಫರಿದಾಬಾದ್ ಮತ್ತು ಗುಜರಾತಿನ ಗಾಂಧಿನಗರದಲ್ಲಿ ಪೊಲೀಸರು ಭಾನುವಾರ ಬಯಲಿಗೆಳೆದ ಉಗ್ರ ಜಾಲಕ್ಕೂ ಈ ಸ್ಫೋಟಕ್ಕೂ ಪರಸ್ಪರ ನಂಟು ಇರುವ ಸಾಧ್ಯತೆ ಎಂದು ಪೊಲೀಸರು ಸಂಶಯಿಸಿದ್ದಾರೆ.
ಫರಿದಾಬಾದ್ನಲ್ಲಿ ಇಬ್ಬರು ವೈದ್ಯರನ್ನು ಬಂಧಿಸಿ 2900 ಕಿ.ಗ್ರಾಂ ಅಮೋನಿಯಂ ನೈಟ್ರೇಟ್, ಎಕೆ 47 ರೈಫಲ್, ಮದ್ದುಗುಂಡು, ಪಿಸ್ತೂಲು ವಶಪಡಿಸಿಕೊಳ್ಳಲಾಗಿತ್ತು. ಗಾಂಧಿನಗರದಲ್ಲಿ ಒಬ್ಬ ವೈದ್ಯ ಅತ್ಯಂತ ಅಪಾಯಕಾರಿಯಾದ ರೈಸಿನ್ ಎಂಬ ವಿಷವನ್ನು ತಯಾರಿಸುತ್ತಿದ್ದ. ಸಾರ್ವಜನಿಕ ಬಳಕೆಯ ನೀರು, ದೇವಸ್ಥಾನಗಳ ಪ್ರಸಾದ ಮತ್ತಿತರೆಡೆ ಈ ವಿಷವನ್ನು ಬೆರೆಸುವ ಉದ್ದೇಶವನ್ನು ಈ ಉಗ್ರ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಉಗ್ರ ಜಾಲ ಬಯಲಾದ ಬೆನ್ನಿಗೆ ದೆಹಲಿಯಲ್ಲಿ ಕಾರು ಸ್ಫೋಟಿಸಿರುವುದು ಭಾರಿ ದೊಡ್ಡ ಮಟ್ಟದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವುದನ್ನು ದೃಢಪಡಿಸಿದೆ.
ಈಗಾಗಲೇ ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎನ್ಐಎ) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ಜಿ) ತಂಡಗಳು ಸ್ಫೋ ನಡೆದ ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸಿವೆ. ಈ ಘಟನೆಯ ನಂತರ, ದೆಹಲಿ-ಎನ್ಸಿಆರ್ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಕೆಂಪುಕೋಟೆ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಸಂಜೆ 6.55ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಐ20 ಕಾರು ರೆಡ್ ಸಿಗ್ನಲ್ ಬಳಿ ನಿಂತಿತು. ಆ ಕಾರಿನಲ್ಲಿಯೇ ಸ್ಫೋಟ ಸಂಭವಿಸಿದೆ. ಕಾರಿನೊಳಗೆ ಸ್ಫೋಟ ಸಂಭವಿಸಿದಾಗಲೂ ಅದರಲ್ಲಿ ಕೆಲವು ಇತರ ಪ್ರಯಾಣಿಕರಿದ್ದರು. ಕಾರಿನ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದವರು, ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಸ್ಫೋಟದಿಂದಾಗಿ ಹತ್ತಿರದ ವಾಹನಗಳಿಗೂ ಬೆಂಕಿಹತ್ತಿಕೊಂಡಿದೆ.
ತನಿಖೆಗೆ ಸಹಾಯ ಮಾಡಲು ರಾಷ್ಟ್ರೀಯ ಭದ್ರತಾ ಪಡೆ (NSG), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ವಿಧಿವಿಜ್ಞಾನ ವಿಭಾಗದ ತಂಡಗಳನ್ನು ನಿಯೋಜಿಸಲಾಗಿದೆ.
























