ಪುತ್ತೂರು: ಬಲ್ನಾಡಿನ ಪಾಲೆಚ್ಚಾರ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಎಗರಿಸಿದ ಘಟನೆ ನಡೆದಿದ್ದು, ಈ ಸಂಬಂಧ ಮನೆಯಲ್ಲಿ ವಾಸ್ತವ್ಯ ಇರುವ ಉಮಾವತಿ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕುದ್ದುಪದವಿನ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಉಮಾವತಿ ಅವರು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಕ್ಟೋಬರ್ 22 ರಂದು ತಮ್ಮ ಪಾಲೆಚ್ಚಾರ್ ಮನೆಗೆ ಹೋಗಿ ಬಂದಿದ್ದರು. ಆ ಬಳಿಕ ನ. 5 ರಂದು ಮತ್ತೆ ಪಾಲೆಚ್ಚಾರ್ ಮನೆಗೆ ಹೋದಾಗ ಕಳ್ಳತನವಾಗಿರುವುದು ಅವರ ಗಮನಕ್ಕೆ ಬಂದಿದೆ.
ಮನೆಯ ಎದುರಿನ ಬಾಗಿಲಿನ ಬೀಗ ಒಡೆದು ಕಳ್ಳರು ಒಳ ಪ್ರವೇಶಿಸಿದ್ದು ಆಭರಣಗಳು, ನಗದು ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.
























