ತಾವೇ ಹೋರಾಟ ಮಾಡಿ, ದುಂಬಾಲು ಬಿದ್ದು ಮಾಡಿಸಿದ್ದ ತನಿಖೆಯೇ ಬೇಡ ಎನ್ನುತ್ತಿರುವ ಹೋರಾಟಗಾರರು
ಬೆಂಗಳೂರು : ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ. ಉತ್ಖನನ ಮಾಡಿ, ತನಿಖೆ ನಡೆಸಿ ಎಂದು ತಾವೇ ಕೊಟ್ಟ ಅತ್ಯಂತ ಮಹತ್ವದ ದೂರನ್ನು ಇದೀಗ ವಜಾಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್ಗೆ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಸಿರುವ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಇಂದು ಅರ್ಜಿ ವಿಚಾರಣೆ ನಡೆಯಲಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬುರುಡೆ ಗ್ಯಾಂಗ್ ನೀಡಿದ್ದ ದೂರನ್ನು ವಜಾಗೊಳಿಸಿ ಎಂದು ಬುರುಡೆ ಗ್ಯಾಂಗ್ ಹೈಕೋರ್ಟ್ಗೆ ಮನವಿ ಮಾಡಿದೆ. ಇವರು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಎಸ್ಐಟಿ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಆರಂಭಿಕ ಎಲ್ಲ ಹೇಳಿಕೆಯಲ್ಲಿ ಎಸ್ಐಟಿ ತನಿಖೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಬುರುಡೆ ಗ್ಯಾಂಗ್ ಇದೀಗ ಎಫ್ಐಆರ್ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದೆ.
ಬುರುಡೆ ಗ್ಯಾಂಗಿನ ಚಿನ್ನಯ್ಯ ನೀಡಿದ ಹೇಳಿಕೆ ಆಧಾರದಲ್ಲಿ ಬುರುಡೆ ಗ್ಯಾಂಗ್ ವಿರುದ್ಧ ಎಸ್ಐಟಿ ಕೇಸ್ ದಾಖಲಿಸಿಕೊಂಡಿದೆ. ಚಿನ್ನಯ್ಯ ಹೆಣ ಹೂತ ಕುರಿತಾಗಿ ಹೇಳಿದ ಕಥೆಯಲ್ಲ ಸುಳ್ಳು ಎನ್ನುವುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ. ಚಿನ್ನಯ್ಯನ ಹೇಳಿಕೆ ಆಧರಿಸಿ ಎಸ್ಐಟಿ ಎಫ್ಐಆರ್ ಹಾಕಿದ್ದು, ಇದು ತನ್ನ ಬುಡಕ್ಕೆ ಬರುತ್ತದೆ ಎಂದು ಅರಿವಾದ ಬಳಿಕ ಈಗ ಬುರುಡೆ ಗ್ಯಾಂಗ್ ತನಿಖೆಯೇ ಬೇಡ ಎಂದು ಹೊಸ ನಾಟಕ ಶುರು ಮಾಡಿದೆ ಎನ್ನಲಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳ ವಿರುದ್ಧ ನಡೆದ ಅಪಪ್ರಚಾರ ಪ್ರಕರಣ ಇದಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್, ಗಿರೀಶ್ ಮಟ್ಟಣ್ಣನವರ್ ವಿಠ್ಠಲ್ ಗೌಡ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದರಿಂದ ಬುರುಡೆಗೆ ಗ್ಯಾಂಗ್ ಸಂಕಷ್ಟಕ್ಕೆ ಸಿಲುಕಿದೆ. ಸುಜಾತಾ ಭಟ್ ಪ್ರಕರಣದಲ್ಲಿ ಮುಖಭಂಗವಾಗಿರುವುದು, ಸುಳ್ಳು ದೂರು, ಸಾಕ್ಷಿ ಸೃಷ್ಟಿ ಹಿನ್ನೆಲೆಯಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬುರುಡೆ ಗ್ಯಾಂಗಿನ ವಕೀಲ ಬಾಲನ್ ಕೋರ್ಟಗೆ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದು ನಿನ್ನೆಯಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದೆ. ಇದರೊಂದಿಗೆ ಬುರುಡೆ ಗ್ಯಾಂಗಿನ ಎಲ್ಲ ಕಳ್ಳಾಟಗಳು ಬಯಲಾಗಿದೆ ಎನ್ನಲಾಗುತ್ತದೆ. ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯುವ ಪ್ರಯತ್ನವಾಗಿ ತಾವೇ ಹೋರಾಟ ಮಾಡಿ ಹಾಕಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಬುರುಡೆ ಗ್ಯಾಂಗ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.
























