ವಿಸಾ ನೆಪದಲ್ಲಿ ಕೋಟಿಗಟ್ಟಲೆ ರೂ. ವಂಚನೆ : ಇಬ್ಬರು ಸೆರೆ

ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ಪಾಸ್‌ಪೋರ್ಟ್‌, ಹಣ ಪಡೆದು ವಂಚಿಸುತ್ತಿದ್ದ ಜೋಡಿ

ಮಂಗಳೂರು : ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ ಹಲವಾರು ಮಂದಿಯನ್ನು ನಂಬಿಸಿ ಹಣ ಪಡೆದುಕೊಂಡು ಸುಮಾರು 1 ಕೋಟಿ ರೂಪಾಯಿ ಮೊತ್ತ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರ್ರಕೃತಿ ಯು. (34) ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ (42) ಎಂದು ಗುರುತಿಸಲಾಗಿದೆ.

ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಮಂದಿಗೆ ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ 1 ಕೋ.ರೂ. ಗೂ ಅಧಿಕ ಹಣವನ್ನು ಪಡೆದುಕೊಂಡು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಜನರಿಂದ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡು ಮನೆಯಲ್ಲಿ ಅಕ್ರಮವಾಗಿ ಇರಿಸುತ್ತಿದ್ದರು ಎನ್ನಲಾಗಿದೆ.





















































 
 

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ 24 ಪಾಸ್‌ಪೋರ್ಟ್‌ಗಳು, 43 ಗ್ರಾಂ ಬಂಗಾರ (ಅಂದಾಜು ಮೌಲ್ಯ 4,30,000 ರೂ.) ಮತ್ತು 2 ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಕಾವೂರು ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು, ಎಸ್ಸೈ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿ ನಾಗರತ್ನ, ರಾಘವೇಂದ್ರ, ಪ್ರವೀಣ್, ರಿಯಾಝ್ ಕಾರ್ಯಾಚರಣೆ ನಡೆಸಿದ್ದರು.

error: Content is protected !!
Scroll to Top