ಅವಮಾನಕಾರಿ ಹೇಳಿಕೆಗೆ ಹಿಮಂತ ಬಿಸ್ವಾ ಶರ್ಮಾ ತಿರುಗೇಟು
ಬೆಂಗಳೂರು : ಸೆಮಿಕಂಡಕ್ಟರ್ ಕೈಗಾರಿಕೆಗಳು ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿರುವ ವಿಚಾರವಾಗಿ ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನ ‘ಫಸ್ಟ್ ಕ್ಲಾಸ್ ಈಡಿಯಟ್’ ಎಂದು ಕರೆದಿರುವ ಹಿಮಂತ್, ಪ್ರಿಯಾಂಕ್ ಹೇಳಿಕೆ ಅಸ್ಸಾಂ ರಾಜ್ಯದ ವಿದ್ಯಾವಂತ ಯುವಜನರಿಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಸ್ಸಾಂ ಸಿಎಂ, ಈ ರೀತಿಯ ಹೇಳಿಕೆಗಳು ತೀವ್ರ ಅವಮಾನಕಾರಿ ಮತ್ತು ಅಪಹಾಸ್ಯಕರವಾಗಿವೆ. ಅಸ್ಸಾಂ ಯುವಕರ ಶ್ರಮ ಮತ್ತು ಪ್ರತಿಭೆಯನ್ನು ತೀವ್ರವಾಗಿ ಅವಹೇಳನ ಮಾಡುವಂತಿವೆ. ಅಸ್ಸಾಂನಲ್ಲಿ ಪ್ರತಿಭಾವಂತ ಯುವಕರು ಇಲ್ಲ ಎಂದು ಅವರು ಹೇಳಿರುವುದು ಅಸ್ಸಾಂ ಯುವಜನರಿಗೆ ಮಾಡಿದ ಅವಮಾನ. ಹೀಗಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ನಾವು ಪ್ರಕರಣ ದಾಖಲಿಸಬಹುದು ಎಂದು ಹೇಳಿದ್ದಾರೆ
ಸೆಮಿಕಂಡಕ್ಟರ್ ಕೈಗಾರಿಕೆಗಳು ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿರುವ ತೀರ್ಮಾನವನ್ನು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರು. ಸೆಮಿಕಂಡಕ್ಟರ್ ಕೈಗಾರಿಕೆಗಳು ಅಸ್ಸಾಂ ಮತ್ತು ಗುಜರಾತ್ಗೆ ಏಕೆ ಹೋಗುತ್ತಿವೆ? ಅವುಗಳು ವಾಸ್ತವದಲ್ಲಿ ಬಯಸಿರೋದು ಬೆಂಗಳೂರನ್ನು. ಆದರೆ ಕರ್ನಾಟಕಕ್ಕೆ ಬರಬೇಕಾದ ಹೂಡಿಕೆಗಳನ್ನು ಕೇಂದ್ರ ಸರ್ಕಾರ ಗುಜರಾತ್ಗೆ ತಿರುಗಿಸುತ್ತಿದೆ. ಗುಜರಾತ್ ಮತ್ತು ಅಸ್ಸಾಂನಲ್ಲಿ ಏನಿದೆ? ಅಲ್ಲಿ ಪ್ರತಿಭೆಗಳು ಇವೆಯೇ ಎಂದು ಪ್ರಶ್ನಿಸಿದ್ದರು. ಅವರ ಈ ಹೇಳಿಕೆ ವಿವಾದದ ರೂಪ ಪಡೆದುಕೊಂಡಿದೆ.
























