ನವದೆಹಲಿ: ಕಳೆದ ಒಂದು ದಿನದಲ್ಲಿ ಸುಮಾರು 300 ಕ್ಕೂ ಅಧಿಕ ಮಾವೋವಾದಿಗಳು ಶರಣಾಗಿದ್ದು, ಇದು ದೇಶದ ಭದ್ರತಾ ಇತಿಹಾಸದಲ್ಲಿ ದೊಡ್ಡ ಹೆಜ್ಜೆಯಾಗಿದೆ. ಈ ಬೆಳವಣಿಗೆಯನ್ನು ಪ್ರಧಾನಿ ಮೋದಿ ಅವರು ಭಾರತ ಶಾಂತಿಯತ್ತ ಇರಿಸುತ್ತಿರುವ ದೊಡ್ಡ ಹೆಜ್ಜೆ ಎಂಬುದಾಗಿ ಹೇಳಿದ್ದಾರೆ.
ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, ಕಳೆದ 75 ಗಂಟೆಗಳಲ್ಲಿ ಸುಮಾರು 303 ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ದಶಕಗಳ ಕಾಲ ಹಿಂಸಾತ್ಮಕ ಪ್ರದೇಶವಾಗಿದ್ದಲ್ಲೆಲ್ಲಾ ಈಗ ಅಭಿವೃದ್ಧಿಯ ಬೆಳಕು ಕಾಣಿಸುತ್ತದೆ. ಭಯವೇ ತುಂಬಿಕೊಂಡಿದ್ದ ಬಸ್ತಾರ್ನಲ್ಲಿ ಈಗ ಬಸ್ತಾರ್ ಒಲಿಂಪಿಕ್ಸ್ ಆಯೋಜನೆಯಾಗುತ್ತಿದ್ದು, ಇದು ಶಾಂತಿಯ ಹೊಸ ಅಧ್ಯಾಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾರಿ ತಪ್ಪಿದ ಯುವಕರನ್ನು ಸರಿ ದಾರಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದರ ಫಲವೇ ನಕ್ಸಲರ ಈ ಶರಣಾಗತಿ. ಚತ್ತೀಸ್ಗಢದಲ್ಲಿ ಒಂದೇ ದಿನ 170 ಮಂದಿ ನಕ್ಸಲರು ಶರಣಾಗಿದ್ದು, ಅವರಿಂದ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ನಕ್ಸಲ್ ಪೀಡಿತ ಪ್ರದೇಶಗಳ ಸಂಖ್ಯೆ 125 ರಿಂದ 11 ಕ್ಕೆ ಇಳಿಕೆಯಾಗಿದೆ. ಸರ್ಕಾರ ಕೈಗೊಂಡ ಕಠಿಣ ಕ್ರಮಗಳು ಮತ್ತು ಶಾಂತಿಯ ಚಟುವಟಿಕೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
























