ಬೆಂಗಳೂರು: ಬಿಜೆಪಿಯ ಹೊಸ ಆಫರ್ ಕುರಿತಂತೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಕೊನೆಯಾಗುವ ಕಾಲದಲ್ಲಿ ಪಕ್ಷಕ್ಕೆ ನಿಷ್ಟೆ ತೋರಿ ಜೈಲು ವಾಸವನ್ನು ಆಯ್ಕೆ ಮಾಡಿಕೊಂಡೆ ಎಂದು ಅವರು ತಿಳಿಸಿದ್ದಾರೆ.
ಸುಮಾರು ಹತ್ತು ಮಂದಿ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆ ಸಮಯದಲ್ಲಿ ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ಮತ್ತೆ ಕ್ವಾಟ್ರಸ್ಗೆ ಕರೆ ತಂದೆ. ಆಗ ನನಗೊಬ್ಬ ಇನ್ಕಂ ಟ್ಯಾಕ್ಸ್ ಅಧಿಕಾರಿ ಕರೆ ಮಾಡಿದ್ದರು. ಇಲ್ಲಿ ಈ ಕರೆ ಬಿಜೆಪಿಯ ಯಾರಿಂದ ಬಂತು ಎಂದು ಹೇಳುವುದು ಬೇಡ. ಕರೆ ಮಾಡಿದ ವ್ಯಕ್ತಿ ನೀವು ಡಿಸಿಎಂ ಆಗುವಿರಾ?, ಜೈಲಿಗೆ ಹೋಗುವಿರಾ? ಎಂದು ಕೇಳಿದರು. ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ ಎಂಬುದಾಗಿ ತಿಳಿಸಿದರು. ಈ ವೇಳೆ ನನ್ನ ಜೊತೆಗೆ ಡಿ.ಜಿ., ಡಿ.ಕೆ. ಸುರೇಶ್ ಸಹ ಇದ್ದರು ಎಂದು ಹೇಳಿದ್ದಾರೆ.
ಆಗ ನಾನು ನನಗೆ ಮನ್ನಣೆ, ಸ್ಥಾನಮಾನ ನೀಡಿರುವ ಪಕ್ಷವನ್ನು ಬಿಡಲಾರೆ, ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ಅಂದು ನಾನು ಬೇರೆ ಆಯ್ಕೆ ಮಾಡುತ್ತಿದ್ದರೆ ಇಂದು ಏನೇನೆಲ್ಲಾ ನಡೆಯುತ್ತಿತ್ತೋ ಗೊತ್ತಿಲ್ಲ ಎಂದು ಅವರು ನುಡಿದಿದ್ದಾರೆ.
























