ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಟಿಕೆಟ್ ದರ ಏರಿಸಿಕೊಂಡ ಖಾಸಗಿ ಬಸ್ಗಳು
ಬೆಂಗಳೂರು: ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಜನ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೊರಡುತ್ತಿದ್ದು, ಹಬ್ಬದ ಸಂದರ್ಭ ಖಾಸಗಿ ಬಸ್ಗಳು ಟಿಕೆಟ್ ದರ ದುಪ್ಪಟ್ಟು ಮಾಡಿಕೊಂಡಿವೆ. ಅ.18 ಶನಿವಾರ ಬರುತ್ತದೆ. ಮರುದಿನ ಭಾನುವಾರ ಹೇಗೋ ರಜೆ ಇದೆ. ನಂತರ ಮೂರು ದಿನ ದೀಪಾವಳಿ ಹಬ್ಬವಿದೆ. ಹೀಗೆ ಸಾಲಾಗಿ ರಜೆಗಳು ಬಂದಿರುವುದರಿಂದ ದೂರದ ಊರುಗಳಲ್ಲಿ ದುಡಿಯುತ್ತಿರುವ ಜನ ಅ.17ರ ಶುಕ್ರವಾರ ರಾತ್ರಿಯಿಂದಲೇ ಊರಿಗೆ ಹೊರಡುವ ಪ್ಲಾನ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಬಸ್ಗಳ ಟಿಕೆಟ್ ದರ ದುಪ್ಪಟ್ಟಾಗಿದೆ.
ಪ್ರತಿ ಸಲ ಹಬ್ಬ ಬರುವಾಗ ಖಾಸಗಿ ಬಸ್ಗಳ ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಬರೆ ಹಾಕೋದು ಮಾಮೂಲಿಯಾಗಿದೆ. ಶುಕ್ರವಾರ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ತೆರಳುವ ಖಾಸಗಿ ಬಸ್ಗಳು ಟಿಕೆಟ್ ದರವನ್ನು ದುಪ್ಪಟು ಮಾಡಿವೆ. ಇನ್ನೂ ಕೆಲ ಬಸ್ಗಳು ಶೇ.50ರಷ್ಟು ಟಿಕೆಟ್ ದರ ಏರಿಕೆ ಮಾಡಿವೆ.
ಬೆಂಗಳೂರು ಮತ್ತು ಮಂಗಳೂರು ನಡುವೆ ಹಳೆ ದರ 1,300-1,400ರೂ. ಇದ್ದರೆ ಹಬ್ಬದ ಸಂದರ್ಭದಲ್ಲಿ 2,300-2,700 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಿಂದ ಉಡುಪಿಗೆ ಹಳೆ ದರ 1,500 ರಿಂದ 1,700 ರೂ. ಇದ್ದರೆ ಹಬ್ಬಕ್ಕಾಗಿ 2,000-2,300 ರೂ. ತನಕ ಏರಿಸಿದ್ದಾರೆ.
ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ಕೊಟ್ಟಿದ್ದು, ಈ ಟಿಕೆಟ್ ದರ ಏರಿಕೆ ಸರಿಯಲ್ಲ. ಸಾರಿಗೆ ಇಲಾಖೆಯಿಂದ ಟಿಕೆಟ್ ದರ ಏರಿಕೆ ಮಾಡಿದ ಬಸ್ಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತೇವೆ. ಜನರಿಗೆ ಸಹಾಯವಾಗಲಿ ಎಂದು 2,500 ಕೆಎಸ್ಆರ್ಟಿಸಿ ಬಸ್ಗಳನ್ನು ಹೆಚ್ಚುವರಿಯಾಗಿ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
























