ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬಾಲಕಿಯರ ಮೇಲೆ ದಾಳಿ ನಡೆಸಿದ ಹೆಜ್ಜೇನು
ಪುತ್ತೂರು: ಹೆಜ್ಜೇನು ದಾಳಿಯಿಂದ ಬಾಲಕಿ ಮೃತಪಟ್ಟ ದಾರುಣ ಘಟನೆ ಸೇಡಿಯಾಪು ಕೂಟೇಲು ಸಮೀಪ ಸಂಭವಿಸಿದೆ. ಶಾಲೆ ಮುಗಿಸಿ ಮನೆಗೆ ತೆರಳುತ್ತಿರುವಾಗ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಮೂವರು ಗಾಯಗೊಂಡಿದ್ದರು. ಈ ಪೈಕಿ ಓರ್ವ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಸೇಡಿಯಾಪು ಕೂಟೇಲು ಎಂಬಲ್ಲಿನ ನಿವಾಸಿ ಕಿರಣ್ ಪೂಜಾರಿ ಎಂಬವರ ಪುತ್ರಿ ದಿಶಾ (7) ಮೃತ ಬಾಲಕಿ. 5ನೇ ತರಗತಿ ಬಾಲಕಿ ಪ್ರತ್ಯೂಶ್ (10), ಸ್ಥಳೀಯ ನಿವಾಸಿ ನಾರಾಯಣ ಗೌಡ (55) ಗಾಯಗೊಂಡಿದ್ದಾರೆ.
ಅ.10ರಂದು ಸಂಜೆ ವಾಹನದಿಂದ ಇಳಿದು ನಡೆದು ಸಾಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಬೊಬ್ಬೆ ಕೇಳಿ ಸ್ಥಳೀಯರಾದ ನಾರಾಯಣ ಗೌಡ ರಕ್ಷಣೆ ತೆರಳಿದ್ದು ಅವರ ಮೇಲೆಯೂ ದಾಳಿ ನಡೆಸಿದೆ. ಮೂವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಗಂಭೀರ ಸ್ಥಿತಿಯಲ್ಲಿದ್ದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ವರ್ಗಾಯಿಸಲಾಗಿತ್ತು. ದಿಶಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪ್ರತ್ಯೂಶ್ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನಾರಾಯಣ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
























