ಮಂಗಳೂರು : ಉಳ್ಳಾಲದ ಕೋಟೆಪುರದಲ್ಲಿರುವ ಮೀನಿನ ಆಹಾರ ತಯಾರಿಕ ಸಂಸ್ಕರಣಾ ಘಟಕದ ಗೋದಾಮು ಬುಧವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಶವಾಗಿದೆ. ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಖಾದರ್ ಎಂಬವರಿಗೆ ಸೇರಿದ ಎಂಎಂಪಿ ಫಿಶ್ ಫುಡ್ ಗೋದಾಮಿಗೆ ರಾತ್ರಿ ಬೆಂಕಿಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲೆ ಹೊರಗೂ ಆವರಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ತುಂಬಾ ಹೊತ್ತಿನ ನಂತರ ಮಂಗಳೂರಿನಿಂದ ಅಗ್ನಿ ಶಾಮಕ ದಳದ ವಾಹನ ಬಂದು ಬೆಂಕಿ ನಂದಿಸಿದೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿದ್ದರು. ಈ ಪ್ರದೇಶದಲ್ಲಿ 14 ಫಿಶ್ ಫುಡ್ ಮತ್ತು ಆಯಿಲ್ ಮಿಲ್ಗಳಿದ್ದು, ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದರೂ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಂಬ್ಯುಲೆನ್ಸ್ ಆಗಲಿ ಅಗ್ನಿ ಶಾಮಕದಳದ ವಾಹನಗಳಾಗಲಿ ಯಾವುದೇ ಸ್ಥಳದಲ್ಲಿರುವುದಿಲ್ಲ.
ಬೆಂಕಿ ಅವಘಡ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೂ ಸ್ಥಳದಲ್ಲಿ ವಾಸಿಸುವ ಸಾವಿರಾರು ಮನೆಗೂ ಅಪಾಯ ಇತ್ತು. ಹೈಟೆನ್ಷನ್ ವಿದ್ಯುತ್ ತಂತಿಯೂ ನೆಲದಡಿಯಿಂದ ಹಾದುಹೋಗಿದೆ. 14 ಫಿಶ್ ಮಿಲ್ಗಳಿದ್ದರೂ ಆಂಬ್ಯುಲೆನ್ಸ್ಗಳಾಗಲಿ, ಅಗ್ನಿಶಾಮಕ ದಳದಂತಹ ಸುರಕ್ಷಾ ಕ್ರಮಗಳಿಲ್ಲದೆ ಸಾರ್ವಜನಿಕರನ್ನು ಅಪಾಯದಲ್ಲಿರಿಸಿ ಘಟಕಗಳು ಕಾರ್ಯಾಚರಿಸುತ್ತಿದೆ ಅನ್ನುವ ಆರೋಪವನ್ನು ಸ್ಥಳಿಯರು ಮಾಡಿದ್ದಾರೆ.
























