ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ : ಕಟಕ್‌ನಲ್ಲಿ ಭುಗಿಲೆದ್ದ ಹಿಂಸಾಚಾರ

13 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ; ಇಂಟರ್‌ನೆಟ್‌ ಸ್ಥಗಿತ

ಭುವನೇಶ್ವರ: ಒಡಿಶಾದ ಕಟಕ್ ​​ನಗರದಲ್ಲಿ ದುರ್ಗಾ ಪೂಜೆಯ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಬಳಿಕ ಭಾನುವಾರದಿಂದ 36 ಗಂಟೆಗಳ ಕಾಲ ಕರ್ಫ್ಯೂ ವಿಧಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆಯಿಂದ 13 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಸಂಜೆ 7 ಗಂಟೆಯಿಂದ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಸಿಎಂಸಿ, ಸಿಡಿಎ ಮತ್ತು ಬಯಾಲಿಶ್ ಮೌಜಾ ಪ್ರದೇಶಗಳಲ್ಲಿ ನಿರ್ಬಂಧಗಳು ಜಾರಿಯಲ್ಲಿವೆ. ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜನರಲ್ಲಿ ಮನವಿ ಮಾಡಿದ್ದಾರೆ.

ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಎಕ್ಸ್ ಸೇರಿದಂತೆ ಎಲ್ಲಾ ಅಂತರ್ಜಾಲ ಮಾಧ್ಯಮ ನಿರ್ಬಂಧಿಸಲಾಗಿದೆ. ರಾತ್ರಿಯಾಗುತ್ತಿದ್ದಂತೆ, ಸೋಮವಾರ ಬೆಳಗ್ಗೆಯಿಂದ ಕಟಕ್‌ನ ವಿವಿಧ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ವಿಧಿಸಲಾಯಿತು. ಪೊಲೀಸರು ನಿರಂತರವಾಗಿ ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸಹ ನಿರ್ಬಂಧಿಸಲಾಗಿದೆ. ಅಹಿತಕರ ಪರಿಸ್ಥಿತಿಯನ್ನು ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎಸ್. ದೇವದತ್ ಸಿಂಗ್ ಹೇಳಿದ್ದಾರೆ.





















































 
 

ಶನಿವಾರ ನಸುಕಿನ ಜಾವ 1.30ರಿಂದ 2 ಗಂಟೆಯ ನಡುವೆ ಹಿಂಸಾಚಾರ ಸಂಭವಿಸಿದೆ. ತಡರಾತ್ರಿಯಲ್ಲಿ ದರ್ಗಾ ಬಜಾರ್ ಪ್ರದೇಶದ ಮೂಲಕ ಕಥಜೋಡಿ ನದಿಯ ದಡದ ಕಡೆಗೆ ಹಾದುಹೋಗುವ ದುರ್ಗಾ ವಿಗ್ರಹ ವಿಸರ್ಜನಾ ಮೆರವಣಿಗೆಯನ್ನು ಸ್ಥಳೀಯರ ಗುಂಪೊಂದು ತಡೆದಿದೆ. ಈ ವೇಳೆ ವಾಗ್ವಾದ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತು. ದುಷ್ಕರ್ಮಿಗಳು ಮನೆಗಳ ಮೇಲಿಂದ ಕಲ್ಲುಗಳು, ಗಾಜಿನ ಬಾಟಲಿಗಳನ್ನು ಎಸೆದಿದ್ದು ಹಿಂಸಾಚಾರಕ್ಕೆ ಕಾರಣವಾಗಿದೆ. ಈ ವೇಳೆ ಕಟಕ್ ಡಿಸಿಪಿ ರಿಷಿಕೇಶ್ ಜ್ಞಾನದೇವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಘಟನೆಯಲ್ಲಿ ವಾಹನಗಳು ಮತ್ತು ರಸ್ತೆ ಬದಿಯ ಅಂಗಡಿಗಳಿಗೆ ಹಾನಿಯಾಗಿದೆ.

ಇದು ಪೂರ್ವಯೋಜಿತ ಗಲಭೆ ಎಂದು ವಿಶ್ವ ಹಿಂದು ಪರಿಷತ್‌ ಸಹಿತ ಹಿಂದು ಸಂಘಟನೆಗಳು ಆರೋಪಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿವೆ. ಘಟನೆಯ ಸಮಗ್ರ ತನಿಖೆ ನಡೆಸಲಾಗುವುದು ಎಂದು ಓಡಿಶಾ ಸರ್ಕಾರ ಭರವಸೆ ನೀಡಿದೆ.

error: Content is protected !!
Scroll to Top