ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಘೋಷಣೆಯಲ್ಲಿ ಅಮೆರಿಕಾದ ಪಾತ್ರ ಇಲ್ಲ ಎಂದು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದೆ.
ಪಾಕ್ ನಡೆಸಿದ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಕೊಟ್ಟ ಆಪರೇಷನ್ ಸಿಂಧೂರ್ ಎಂಬ ಶಾಕ್ನ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಈ ಮಾತುಗಳನ್ನು ಹೇಳಿದ್ದಾರೆ. ನಾವು ಭಾರತದ ಜೊತೆಗೆ ಮಾತುಕತೆ ನಡೆಸಲು ಬಯಸುತ್ತೇವೆ. ಆದರೆ ಈ ಸಂಬಂಧ ಭಾರತದಿಂದ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗೆಯೇ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಯಾವ ಮೂರನೇಯವರ ಮಧ್ಯಸ್ಥಿಕೆಗೂ ಒಪ್ಪಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಅಮೆರಿಕಾದ ರಾಜತಾಂತ್ರಿಕ ಜೊತೆಗೂ ನಾವು ಮಾತನಾಡಿದ್ದು ಅವರು ಭಾರತ ಮೂರನೇಯವರ ಮಧ್ಯಸ್ಥಿಕೆಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, ಈ ವಿಷಯ ಸಂಪೂರ್ಣ ದ್ವಿಪಕ್ಷೀಯ ಎಂದು ಖಡಾಖಂಡಿತವಾಗಿ ಹೇಳಿದೆ ಎಂಬ ಉತ್ತರ ದೊರೆತಿದೆ ಎಂದೂ ನುಡಿದಿದ್ದಾರೆ.
ಹಾಗೆಯೇ, ನಾವು ಭಾರತದ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ. ನಮ್ಮ ಮಾತುಕತೆ ಭಾರತ ನಡೆಸಿದ ರೀತಿಯಲ್ಲೇ ನಡೆಯುತ್ತದೆ. ಆದರೆ ಇದಕ್ಕಾಗಿ ನಾವು ಬೇಡಿಕೊಳ್ಳುವುದಿಲ್ಲ. ಯಾವುದೇ ರಾಷ್ಟ್ರ ಮಾತನಾಡಲು ಬಯಸಿದರೆ ನಾವದನ್ನು ಸ್ವಾಗತಿಸುತ್ತೇವೆ. ಮಾತುಕತೆಗಳಿಂದ ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಲು ಸಾಧ್ಯ. ಪಾಕಿಸ್ತಾನ ಶಾಂತಿಪ್ರಿಯ ರಾಷ್ಟ್ರ ಎಂದಿದ್ದಾರೆ.
























