ಪುತ್ತೂರು: ಭಾರತದ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಮತ್ತು ಉಳ್ಳಾಲದ ವೀರ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ದಕ್ಷಿಣ ಕರ್ನಾಟಕದಾದ್ಯಂತ ರಥಯಾತ್ರೆ ಹಮ್ಮಿಕೊಂಡಿದ್ದು, ಸೆ.15 ರಂದು ಪುತ್ತೂರಿಗೆ ಆಗಮಿಸುವ ರಥವನ್ನು ಪುತ್ತೂರಿನಲ್ಲಿ ಸ್ವಾಗತಿಸಲಾಗುವುದು ಎಂದು ಎಬಿವಿಪಿ ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್ ಕೆ. ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ವೀರ ರಾಣಿ ಅಬ್ಬಕ್ಕ ಅವರ 500 ನೇ ಜಯಂತ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಾಹಸಿ ಅಬ್ಬಕ್ಕನ ಜೀವನ ಚರಿತ್ರೆಯನ್ನು ಇಂದಿನ ಪೀಳಿಗೆಯೂ ಅರಿಯುವ ನಿಟ್ಟಿನಲ್ಲಿ ಎರಡು ವಿಭಾಗಗಳಲ್ಲಿ ಬೃಹತ್ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.
ಈ ರಥಯಾತ್ರೆಯು ಸೆ.15 ರಂದು ಉಪ್ಪಿನಂಗಡಿಯ ಮೂಲಕ ಮಧ್ಯಾಹ್ನ 2 ಪುತ್ತೂರಿಗೆ ಆಗಮಿನಲ್ಲಿದ್ದು ನಗರದ ಪಡೀಲಿನಲ್ಲಿ ರಥವನ್ನು ಸ್ವಾಗತಿಸಿ ಅನಂತರ ಬೊಳುವಾರು ಮೂಲಕ ನೆಹರುನಗರಕ್ಕೆ ಶೋಭಾಯಾತ್ರೆಯಲ್ಲಿ ತೆರಳಿ ವಿವೇಕಾನಂದ ವಿದ್ಯಾವರ್ದಕ ಸಂಘದ ಆವರಣದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಕಿರಣ್ಚಂದ್ರ ಪುಷ್ಪ ಗಿರಿ ಪಾಲ್ಗೊಳ್ಳುವರು. ಈ ಸಂರ್ದಭದಲ್ಲಿ ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿ ಪ್ರಮುಖರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಎಲ್ಲಾ ಪದಾಧಿಕಾರಿಗಳು ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕರು, ಪ್ರಾಂಶುಪಾಲರು, ಉಪಾನ್ಯಸಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಬಿವಿಪಿ ಮಂಗಳೂರು ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಸಿಂಚನಾ, ಪುತ್ತೂರು ನಗರ ಸಹ ಕಾರ್ಯದರ್ಶಿ ರಕ್ಷಾ, ನಗರ ಕಾರ್ಯದರ್ಶಿ ಚರಣ್ ರಾಜ್ ಉಪಸ್ಥಿತರಿದ್ದರು.
























