ಯೂಟ್ಯೂಬರ್ಗಳಿಗೆ ಹರಿದು ಬಂದ ಹಣದ ಮೂಲ; ಷಡ್ಯಂತ್ರದ ರೂವಾರಿಗಳನ್ನು ಪತ್ತೆ ಹಚ್ಚಲು ಮನವಿ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಗುರಿಯಾಗಿಸಿಕೊಂಡು ಅಕ್ರಮ ಹಣ ವರ್ಗಾವಣೆ, ಕ್ರಿಮಿನಲ್ ಸಂಚು ರೂಪಿಸುತ್ತಿರುವ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರ್ಮಸ್ಥಳ ಗ್ರಾಮದ ಸುರೇಂದ್ರ ಪ್ರಭು ಎಂಬವರು ಬೆಳ್ತಂಗಡಿ ಎಸ್ಐಟಿ ಠಾಣೆಗೆ ಸೆ.9ರಂದು ದೂರು ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಯೂಟ್ಯೂಬ್ ಚಾನೆಲ್ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇವಾಲಯದ ವಿರುದ್ಧ ಸುಳ್ಳು ನಿರೂಪಣೆ ಸೃಷ್ಟಿಸುವ ಉದ್ದೇಶದಿಂದ ನಿರಂತರವಾಗಿ ಮಾನನಷ್ಟ, ಪ್ರಚೋದನಕಾರಿ, ದಾರಿ ತಪ್ಪಿಸುವ ವಿಷಯ ಮತ್ತು ಏಕಪಕ್ಷಿಯ ನಿರೂಪಣೆ ಬಿತ್ತರಿಸುತ್ತಿವೆ. ಇದೊಂದು ಯೋಜಿತ ಪಿತೂರಿಯ ಭಾಗವಾಗಿದ್ದು ಇದನ್ನು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳಕ್ಕೂ ವಿಸ್ತರಿಸಲಾಗುತ್ತಿದೆ.
ಇಂತಹ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ವ್ಯವಸ್ಥೆ ಹಾಗೂ ಇದರ ಹಿಂದೆ ಕೆಲಸ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು 17 ಕನ್ನಡ, 2 ಆಂಗ್ಲ, 2 ಮಲಯಾಳಂ, 10 ತಮಿಳು ಹಾಗೂ ಒಂದು ತೆಲುಗು ಯೂಟ್ಯೂಬ್ ಚಾನೆಲ್ಗಳ ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದು ಇವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಈ ನಡುವೆ ಪ್ರಮುಖ ಆರೋಪಿ ಬುರುಡೆ ಚಿನ್ನಯ್ಯನ ಅನುಪಸ್ಥಿತಿಯಲ್ಲಿ 3 ದಿನಗಳಿಂದ ಬುರುಡೆ ಪ್ರಕರಣದ ಪ್ರಮುಖ ಪಾತ್ರಧಾರಿಗಳನ್ನು ಡ್ರಿಲ್ ಮಾಡುತ್ತಿರುವ ಎಸ್ಐಟಿ ಅಧಿಕಾರಿಗಳು ಮಂಗಳವಾರ ಏಕಕಾದಲ್ಲಿ 6 ಜನರನ್ನು ತನಿಖೆಗೆ ಒಳಡಪಡಿಸಿದ್ದಾರೆ. ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ ಗೌಡ, ಪ್ರದೀಪ್ ಗೌಡ ಮತ್ತು ಯೂಟ್ಯೂಬರ್ಗಳಾದ ಮನಾಫ್ ಮತ್ತು ಅಭಿಷೇಕ್ ಅವರನ್ನು ಇಡೀ ದಿನ ವಿಚಾರಣೆ ನಡೆಸಲಾಯಿತು. ಕೆಲವರ ವಿಚಾರಣೆ ಬುಧವಾರವೂ ನಡೆಯುವ ಸಾಧ್ಯತೆ ಇದೆ.
ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ಹೆಕ್ಕಿದ್ದು ಯಾರು? ನೆಲದ ಮೇಲಿನಿಂದ ತೆಗೆಯಲಾಯಿತೇ? ಅಗೆದು ತೆಗೆಯಲಾಗಿದೆಯೇ? ಯಾರ್ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದಾರೆ? ಚಿನ್ನಯ್ಯನನ್ನು ಬಳಸಿಕೊಂಡ ಉದ್ದೇಶ, ಬುರುಡೆ ಸಂಗ್ರಹಿಸಿದ ಉದ್ದೇಶ, ಸಂಚು ಎಲ್ಲೆಲ್ಲೆ ನಡೆದಿದೆ? ಹಣಕಾಸು ವ್ಯವಹಾರ ಇತ್ಯಾದಿ ಅಂಶಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ಶನಿವಾರ ರಾತ್ರಿ ಬಂಗ್ಲೆಗುಡ್ಡೆ ಕಾಡಿಗೆ ಮಜಹರು ನಡೆಸಲು ತೆರಳಿದ ಸಂದರ್ಭ ಅಲ್ಲಿನ ಮಣ್ಣನ್ನು ಸಂಗ್ರಹಿಸಿ ತರಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಕೋನದಲ್ಲೂ ತನಿಖೆ ನಡೆಯುತ್ತಿದೆ.
























