ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಬುರುಡೆ ವಿಷಯಕ್ಕೆ ಸಂಬಂಧಿಸಿದ ಹಾಗೆ ಕಳೆದ ಒಂದು ವರ್ಷದಿಂದಲೇ ತಯಾರಿ ನಡೆದಿತ್ತು. ಚೆನ್ನಯ್ಯನ ಮೂಲಕ ಕಾಡಿನಲ್ಲಿ ಕೆಲವು ಸ್ಥಳಗಳನ್ನು ಗುರುತು ಮಾಡಿ ಅಲ್ಲಿ ಗಿಡಗಳನ್ನು ನೆಡಲಾಗಿತ್ತು ಎಂಬ ಅಂಶ SIT ಗೆ ಗೊತ್ತಾಗಿದೆ.
ದೂರುದಾರ ಆರೋಪಿ ಚೆನ್ನಯ್ಯನನ್ನು ಕಳೆದ ಕೆಲ ದಿನಗಳಿಂದಲೂ SIT ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಚೆನ್ನಯ್ಯನ ಪಾತ್ರ ಸೃಷ್ಟಿಯಾದಾಗಿಂದ ಈ ವರೆಗಿನ ಎಲ್ಲಾ ವಿಚಾರಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಗಿರೀಶ್ ಮಟ್ಟಣ್ಣನವರ್ ತಂಡ ಕಳೆದ ಒಂದು ವರ್ಷದ ಹಿಂದೆಯೇ ನೇತ್ರಾವತಿ ಸ್ನಾನಘಟ್ಟ, ಬಂಗ್ಲಗುಡ್ಡ, ಬಾಹುಬಲಿ ಬೆಟ್ಟ, ಬೊಳಿಯರು ಸೇರಿದಂತೆ ಹಲವಾರು ಕಡೆಗಳಲ್ಲಿ ಮಾನವನ ಅಸ್ಥಿಪಂಜರ ಸಿಗಬೇಕೆಂದು ಕರಾರುವಕ್ಕಾಗಿ ಯೋಜನೆ ರೂಪಿಸಿತ್ತು ಎಂದು ತಿಳಿದು ಬಂದಿದೆ.
ಶೋಧ ಕಾರ್ಯದ ವೇಳೆ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆಇರದ ಗಿಡಗಳನ್ನು ನೆಟ್ಟಿತ್ತು. ವಿಶೇಷ ಗಿಡಗಳ ಮೂಲಕ ತಾಣಗಳನ್ನು ಸುಲಭವಾಗಿ ಗುರುತಿಸಲು ಚೆನ್ನಯ್ಯನಿಗೆ ತಿಳಿಸಲಾಗಿತ್ತು. ಎಸ್ಐಟಿ ಕಾರ್ಯಾಚರಣೆ ಸಂದರ್ಭ ಚಿನ್ನಯ್ಯ ಸಹ ಅಂತಹ ಗಿಡಗಳ ಆಸುಪಾಸಿನಲ್ಲೇ ಅಗೆಯುವಂತೆ ಸೂಚಿಸಿದ್ದ. ಇದನ್ನು ಸ್ವತಃ ಚೆನ್ನಯ್ಯನೇ ತಾನು ಸ್ಥಳ ಗುರುತಿಸಿದ ಗುಟ್ಟಿನ ಕುರಿತಂತೆ ಎಸ್ಐಟಿಗೆ ಬಾಯ್ದಿಟ್ಟಿದ್ದಾನೆ. ಗಿಡ ಇರುವ ಪ್ರದೇಶದಿಂದ ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಅಗೆಯಬೇಕು ಎಂಬಿತ್ಯಾದಿ ಪೂರ್ವ ತಯಾರಿಗಳನ್ನು ವರ್ಷದ ಹಿಂದೆಯೇ ಮಾಡಲಾಗಿತ್ತು. ಆದರೆ ಇಷ್ಟೆಲ್ಲ ಮಾಡಿದರೂ ಬುರುಡೆ ಗ್ಯಾಂಗ್ನ ಕಾರ್ಯ ಮಾತ್ರ ಸಾಧನೆಯಾಗದೆ ಪ್ರಕರಣವೇ ಮತ್ತೊಂದು ತಿರುವು ಪಡೆದುಕೊಂಡಿದೆ.
























