ಪುತ್ತೂರು: ತುಳುನಾಡಿನಲ್ಲಿ ಅತ್ಯಂತ ಮಹತ್ವವನ್ನು ಪಡೆದಿರುವ ಕದಿರು ವಿನಿಯೋಗ ಕಾರ್ಯಕ್ರಮ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು.
ಇದಕ್ಕೆ ಪೂರಕವಾಗಿ ಸೋಮವಾರ ದೇವರಮಾರು ಗದ್ದೆಯಲ್ಲಿ ಕದಿರು ಕೊಯ್ಯುವ ಮುಹೂರ್ತ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ಗದ್ದೆಗೆ ಹಾಲೆರೆಯುವ ಮೂಲಕ ಕದಿರು ಕೊಯ್ಯುವ ಮುಹೂರ್ತಕ್ಕೆ ಚಾಲನೆ ನೀಡಿದರು.
ಮಂಗಳವಾರ ಗೌರಿ ಪೂಜೆಯಂದು ಶ್ರೀದೇವರು ಗರ್ಭಗುಡಿಯಿಂದ ಹೊರಬಂದು ಚಂಡೆ, ವಾದ್ಯಗಳೊಂದಿಗೆ ತೆರಳಿದರು. ಬಳಿಕ ಅಶ್ವತ್ಥಕಟ್ಟೆಯಲ್ಲಿ ಇಡಲಾಗಿದ್ದ ಕದಿರುತೆನೆಗೆ ತೀರ್ಥ ಸಂಪ್ರೋಕ್ಷಣೆ ಮಾಡಿ ಪೂಜೆ ನಡೆದ ಬಳಿಕ ಶ್ರೀ ದೇವರ ಸಹಿತ ಕದಿತೆನೆಯನ್ನು ದೇವಸ್ಥಾನದ ಒಳಾಂಗಣಕ್ಕೆ ತರಲಾಯಿತು.
ಬಳಿಕ ಶ್ರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದು ಪರಿವಾರ ಗುಡಿಗಳಿಗೆ ಕದಿರು ಕಟ್ಟಿದ ಬಳಿಕ ಭಕ್ತರಿಗೆ ಕದಿರು ತೆನೆ ವಿತರಿಸಲಾಯಿತು. ನೂರಾರು ಭಕ್ತರು ದೇವಸ್ಥಾನದ ಒಳಾಂಗಣದಲ್ಲಿ ಸರತಿ ಸಾಲಿನಲ್ಲಿ ನಿಂತು ಕದಿ ಪಡೆದುಕೊಂಡರು. ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಪೂಜಾ ವಿದಿವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ ಸುವರ್ಣ, ಸುಭಾಶ್ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
























