ಪುತ್ತೂರು: ಪುತ್ತೂರು: ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಪುತ್ತೂರಿನ ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಆಲಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಉಲ್ಲೇಖಿಸಿ ಅವಮಾನಕರ ರೀತಿಯ ಮಾತುಗಳನ್ನಾಡಿದ್ದಾರೆ. ಇದು ಖಂಡನೀಯ. ಸರ್ವ ಧರ್ಮಗಳನ್ನೂ ಗೌರವಿಸುತ್ತಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ವಿವಾದದ ಮಧ್ಯೆ ಎಳೆದು ತರುವುದು ತಪ್ಪು ಎಂದು ಬಿಜೆಪಿ ಹೇಳಿಕೆ.
ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನಾರ್ದನ ಪೂಜಾರಿ ಅವರು ತಮ್ಮ ಹೇಳಿಕೆಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರ ಉಲ್ಲೇಖ ಮಾಡಿದ್ದಾರೆ ಎಂಬ ಕಾರಣಕ್ಕೆ ಅದನ್ನು ಖಂಡಿಸಿ ನಗರ ಕಾಂಗ್ರೆಸ್ ಸ್ವಯಂ ಘೋಷಿತ ಅಧ್ಯಕ್ಷ ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ ತಮ್ಮ ಮಾತಿನಲ್ಲಿ ಪೂಜಾರಿ ಅವರದ್ದು ನಾರಾಯಣ ಗುರುಗಳ ಸಿದ್ಧಾಂತವೋ ಅಥವಾ ಬೇರಾವುದೋ ಸಿದ್ಧಾಂತವೋ ಎಂದು ಕೇಳಿದ್ದರು. ಪೂಜಾರಿ ಅವರನ್ನು ಖಂಡಿಸುವುದು, ಬಿಡುವುದು ಅವರಿಗೆ ಬಿಟ್ಟದ್ದರು. ಆದರೆ ಈ ವಿವಾದದಲ್ಲಿ ನಾರಾಯಣ ಗುರುಗಳನ್ನು ಎಳೆದು ತಂದಿದ್ದೇಕೆ ಎಂದು ಪ್ರಶ್ನಿಸಿದರು.
ಆಲಿ ಅವರಿಗೇನು ಗೊತ್ತು ಆಲದ ಮರದ ಆಳ, ಹರಿವು ಎಂದು ಕೇಳಿದ ಅವರು, ನಾರಾಯಣ ಗುರುಗಳು ದೇಶ ಕಂಡ ಮಹಾನ್ ಸಂತ. ವಿಶ್ವಗುರುವಾಗಿದ್ದವರು. ೧೯೨೪ರಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ ಸರ್ವಧರ್ಮ ಸಮ್ಮೇಳನ ನಡೆಸಿದವರು. ಎಲ್ಲ ಧರ್ಮಗಳನ್ನು ಅವರು ಗೌರವಿಸುತ್ತಿದ್ದರು. ಪ್ರೀತಿಸುತ್ತಿದ್ದರು. ಅವರು ಕೇವಲ ಬಿಲ್ಲವ ಸಮಾಜಕ್ಕೆ ಮಾತ್ರ ಗುರುಗಳಲ್ಲ, ಅವರು ವಿಶ್ವವಂದ್ಯ ಸಂತರು. ಆಲಿ ಅವರು ಗುರುಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂದರು.
ಆಲಿ ಅವರನ್ನು ಪುತ್ತೂರಿನ ಕಾಂಗ್ರೆಸ್ ಮುಖಂಡರು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮಗೆ ಮುಸ್ಲಿಂ, ಕ್ರೈಸ್ತ ಧರ್ಮದ ಬಗ್ಗೆ ಗೌರರವಿದೆ. ಅದೇ ರೀತಿ ಆಲಿಯವರೇ ನಿಮಗೂ ನಾರಾಯಣ ಗುರುಗಳ ಬಗ್ಗೆ ಗೌರವ ಇರಬೇಕಲ್ಲವೇ? ಸಮಾಜ ಒಡೆಯುವ ಕೆಲಸ ಮಾಡಬೇಡಿ. ನಿಮ್ಮನ್ನು ಅತಿ ಹೆಚ್ಚು ದೂಷಣೆ ಮಾಡುವವರು ಕಾಂಗ್ರೆಸಿಗರೇ ಹೊರತು ಬಿಜೆಪಿಯವರಲ್ಲ. ನೀವು ನೀಡಿದ ಹೇಳಿಕೆ ನೋಡಿದರೆ ಸಮಾಜವನ್ನು ಒಡೆಯುವ ಉದ್ದೇಶ ಹೊ೦ದಿರುವಿರಾ? ನಿಮ್ಮದು ಬುರುಡೆ ಗ್ಯಾಂಗಾ? ಅಥವಾ ಸಮೀರ್ ಗ್ಯಾಂಗಾ? ಯಾವುದಾದರೂ ಟೂಲ್ ಕಿಟ್ನ ಭಾಗವಾಗಿ ಈ ಹೇಳಿಕೆ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪಕ್ಷದ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಒಬಿಸಿ ಮೋರ್ಚಾದ ನಿರಂಜನ್ ಉಪಸ್ಥಿತರಿದ್ದರು.
























