ಒಂದೇ ದಿನದಲ್ಲಿ ಬಹಿರಂಗವಾಯಿತು ಫೋಟೊ ಅಸಲಿಯತ್ತು
ಬೆಂಗಳೂರು: ಧರ್ಮಸ್ಥಳ ಪ್ರಕರಣ ದಿನ ಕಳೆದಂತೆ ಜಟಿಲವಾಗುತ್ತಿದೆ. ನಿನ್ನೆ ಸುಜಾತ ಭಟ್ ಎಂಬ ವೃದ್ಧೆ ಧರ್ಮಸ್ಥಳದಲ್ಲಿ 40 ವರ್ಷದ ಹಿಂದೆ ನಾಪತ್ತೆಯಾಗಿರುವ ತನ್ನ ಪುತ್ರಿ ಅನನ್ಯಾ ಭಟ್ ಇವಳೇ ಎಂದು ಹೇಳಿ ತೋರಿಸಿದ್ದ ಕಲರ್ ಫೋಟ್ ಯಾರದ್ದು ಎನ್ನುವುದನ್ನು ಸುದ್ದಿವಾಹಿನಿಯೊಂದು ಪತ್ತೆ ಹಚ್ಚಿ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂಬ ಆರೋಪಕ್ಕೆ ಇನ್ನೊಂದು ಪುರಾವೆ ಒದಗಿಸಿದೆ.
2007ರಲ್ಲಿ ಸಾವಿಗೀಡಾಗಿರುವ ಕೊಡಗು ಮೂಲದ ವಾಸಂತಿ ಎಂಬ ಯುವತಿಯ ಕಾಲೇಜು ದಿನಗಳ ಫೋಟೊ ನೀಡಿ ಇವಳೇ ತನ್ನ ಮಗಳು ಅನನ್ಯಾ ಭಟ್ ಎಂದು ಹೇಳಿದ್ದರು ಎನ್ನುವುದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಪತ್ತೆ ಮಾಡಿದೆ. ಸುಜಾತಾ ಭಟ್ಗೆ ಈ ಖತರ್ನಾಕ್ ಐಡಿಯಾ ಕೊಟ್ಟದ್ದು ಯೂಟ್ಯೂಬರ್ ಮೊಹಮ್ಮದ್ ಸಮೀರ್. ಯಾರದ್ದೋ ಹಳೇ ಫೋಟೋ ಬಿಡುಗಡೆ ಮಾಡಬೇಕು. ಸದ್ಯ ಪ್ರಶ್ನೆ ಕೇಳುತ್ತಿರುವ ಜನರ ಬಾಯಿ ಮುಚ್ಚಿಸಬೇಕು ಎನ್ನುವ ನಿಟ್ಟಿನಲ್ಲಿ ಸಮೀರ್ ಇಂಥದ್ದೊಂದು ಅಧ್ವಾನದ ಪ್ಲ್ಯಾನ್ ಮಾಡಿದ್ದ ಎಂದು ಈ ವಾಹಿನಿ ವರದಿ ಮಾಡಿದೆ. ಈ ವಿಚಾರ ಇಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸತೊಡಗಿದ್ದಾರೆ. ನಿನ್ನೆಯೇ ಫೋಟೊದಲ್ಲಿದ್ದ ಪೆನ್ನಿನಲ್ಲಿಟ್ಟ ಬಿಂದಿಯನ್ನು ನೋಡಿ ಫೊಟೊದ ಸಾಚಾತನದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಅನನ್ಯಾಳ ಹೆಸರಲ್ಲಿ ಯಾರ ಫೋಟೋ ಬಿಡುಗಡೆ ಮಾಡುವುದು ಎನ್ನುವ ಪ್ರಶ್ನೆ ಬಂದಾಗ ಎಂಡಿ ಸಮೀರ್ ಕೆಲವು ಷರತ್ತುಗಳನ್ನು ಕೂಡ ಹಾಕಿದ್ದ. ಎಲ್ಲಿಯೂ ಸಿಕ್ಕಿಹಾಕಿಕೊಳ್ಳದಂತೆ ಸಮೀರ್ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಸುಜಾತಾ ಭಟ್ಗೆ ಅನನ್ಯಾ ಭಟ್ ಎನ್ನುವ ಮಗಳು ಇದ್ದಳು ಎನ್ನುವುದಕ್ಕೆ ಕೊನೆಪಕ್ಷ ಒಂದು ಫೋಟೋ ಕೊಡಿ ಎಂದು ಜನ ಕೇಳುವುದಕ್ಕೆ ತೊಡಗಿದ್ದರು. ಆಗ ನಡೆದ ಒಂದು ಸಭೆಯಲ್ಲಿ ಅನನ್ಯಾ ಭಟ್ ಫೋಟೋವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ರೂಪುಗೊಂಡಿತ್ತು.
ಬದುಕಿರುವವರ ಫೋಟೊ ಆಗಿರಬಾರದು. ಮೃತಪಟ್ಟು ತುಂಬ ವರ್ಷ ಆಗಿರುವ ಹುಡುಗಿ ಫೋಟೊ ಬೇಕು. ಆ ಫೋಟೋ ಗುರುತಿಸಿ ಹೇಳಬಲ್ಲಂಥವರು ಇರಬಾರದು. ಅಂಥವರ ಫೋಟೊ ಬೇಕು ಎಂದ ಸಮೀರ್ ಷರತ್ತು ವಿಧಿಸಿದ್ದ. ಇಂಟರ್ನೆಟ್ನಲ್ಲಿ ಹಲವು ಫೋಟೊಗಳನ್ನು ಈ ತಂಡ ಹುಡುಕಿದೆ. ಆದರೆ ಇಮೇಜ್ ಸರ್ಚ್ನಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದ್ದ ಹಿನ್ನಲೆಯಲ್ಲಿ ಗ್ಯಾಂಗ್ ಈ ಪ್ಲ್ಯಾನ್ ಕೈಬಿಟ್ಟಿತ್ತು.
ಈ ಹಂತದಲ್ಲಿ ಸುಜಾತಾ ಭಟ್ರನ್ನೇ ಯಾವುದಾದರೂ ಫೋಟೊ ಇದ್ದರೆ ಕೊಡಿ ಎಂದು ಕೇಳಿದ್ದ. ತುಂಬ ಹಿಂದೆ ಮೃತಪಟ್ಟಿರುವ ಯುವತಿಯ ಫೋಟೋ ಆಗಿರಬೇಕು. 20-22 ವರ್ಷದ ಹುಡುಗಿ ಫೋಟೊ ಇದ್ದರೆ ನೀಡಿ ಎಂದಿದ್ದ. ಸಮೀರ್ ಪ್ಲ್ಯಾನ್ ಪಕ್ಕಾ ಇತ್ತು. ಹದಿನೆಂಟು-ಇಪ್ಪತ್ತು ವರ್ಷಗಳ ಹಿಂದೆ ಸತ್ತುಹೋದ ಯುವತಿಯ ಫೋಟೊ ತಂದು ಇವಳೇ ಅನನ್ಯಾ ಭಟ್ ಅಂತಾ ಸುಜಾತಾಳ ಕೈಯಲ್ಲಿ ಹೇಳಿಸಿಬಿಡಬೇಕು. ಆಕೆಯ ಕುಟುಂಬಸ್ಥರು ಬಂದು ಇದು ನಮ್ಮವಳ ಫೋಟೊ ಅನ್ನದಿದ್ದರೆ ಸಾಕು. ಜನರಿಗಂತೂ ಏನೂ ಗೊತ್ತಾಗುವುದಿಲ್ಲ. ನಾವು ಏನು ಹೇಳಿದರೂ ನಂಬುತ್ತಾರೆ ಎಂದು ಪ್ಲ್ಯಾನ್ ಮಾಡಿದ್ದು ಎಂಡಿ ಸಮೀರ್. ಆಗ ಸುಜಾತಾ ನನ್ನ ಹತ್ರ ಅಂಥ ಒಂದು ಫೋಟೋ ಇದೆ ಎಂದಿದ್ದರು.
ಈ ಹಂತದಲ್ಲಿ ರಂಗಪ್ರಸಾದ್ ಎಂಬವರ ಸೊಸೆ ವಾಸಂತಿ ಫೋಟೋವನ್ನು ಸುಜಾತಾ ನೀಡಿದ್ದರು. ರಂಗಪ್ರಸಾದ್ ಮಗ ಶ್ರೀವತ್ಸ ಪತ್ನಿ ಈ ವಾಸಂತಿ. ವಾಸಂತಿಯ ಫೋಟೊ ಹಳೆಯ ಫೈಲಲ್ಲಿದೆ ಎಂದು ಸುಜಾತಾ ಹೇಳಿದ್ದರು. ವಾಸಂತಿ 2007ರಲ್ಲಿಯೇ ಮೃತಪಟ್ಟಿದ್ದರು. ಆಕೆಯನ್ನು ಗುರುತಿಸಬಲ್ಲ ಏಕೈಕ ವ್ಯಕ್ತಿ ಆಕೆಯ ಗಂಡ ಶ್ರೀವತ್ಸ. ಆತ ಕೂಡ 2025ರಲ್ಲಿಯೇ ಸಾವು ಕಂಡಿದ್ದಾರೆ ಎಂದಿದ್ದರು. ತನ್ನ ಸೊಸೆಯ ಫೋಟೊವನ್ನು ರಂಗಪ್ರಸಾದ್ ಗುರುತಿಸಬಹುದಿತ್ತು. ಅದರೆ, ಈ ವರ್ಷದ ಜನವರಿ 12ಕ್ಕೆ ಆತ ಕೂಡ ಸಾವು ಕಂಡಿದ್ದಾರೆ. ಇನ್ನು ರಂಗಪ್ರಸಾದ್ಗೆ ಇರುವ ಮಗಳಿಗೆ ವಾಸಂತಿಯ ಯಾವುದೇ ಸಂಪರ್ಕ ಇಲ್ಲ ಎಂದು ಸುಜಾತಾ ಭಟ್ ತಿಳಿಸಿದ್ದರು.
ವಾಸಂತಿ ತವರು ಮನೆಯವರು ಗುರುತಿಸುವ ಅಪಾಯ ಕೂಡ ಇತ್ತು. ಅದಕ್ಕಾಗಿ ವಾಸಂತಿ ಕಾಲೇಜು ದಿನಗಳ ಫೋಟೊ ನೀಡುವ ತೀರ್ಮಾನ ಮಾಡಿದ್ದರು. ಮೃತಪಟ್ಟಾಗ ವಾಸಂತಿ ಇದ್ದಿದ್ದೇ ಬೇರೆ ರೀತಿ ಎನ್ನುವ ಅರಿವು ಕೂಡ ಅವರಲ್ಲಿತ್ತು. ವಾಸಂತಿ ಫೋಟೋ ನೋಡಿ ಸಮೀರ್ ಕೂಡ ಒಪ್ಪಿದ್ದ. ‘ಅನನ್ಯಾ’ಳ ಹೆಸರಿನಲ್ಲಿ ‘ವಾಸಂತಿ’ ಫೋಟೋ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದ. ಇನ್ನು ಫೋಟೋ ಬಿಡುಗಡೆಗೂ ಮುನ್ನ ಮತ್ತೊಂದು ಖತರ್ನಾಕ್ ಪ್ಲ್ಯಾನ್ ಕೂಡ ಮಾಡಿದ್ದ. ಬೋಳು ಹಣೆಯ ಫೋಟೋಗೆ ಸಮೀರ್ ಎಂ.ಡಿ ಬೊಟ್ಟು ಇಟ್ಟಿದ್ದ. ಪೆನ್ನಿನಿಂದ ತನ್ನ ಕೈಯಾರೇ ಸಮೀರ್ ಬೊಟ್ಟು ಇಟ್ಟಿದ್ದ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.
























