ನವದೆಹಲಿ: ಆಪರೇಷನ್ ಸಿಂಧೂರ್ಗೆ ಸಂಬಂಧಿಸಿದ ಹಾಗೆ ಕೇಂದ್ರ ಸಚಿವ ಎಸ್. ಜೈಶಂಕರ್ ಅವರು ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ 1947 ರಿಂದಲೂ ಎದುರಿಸುತ್ತಲೇ ಬಂದಿದೆ. ಪ್ರಸ್ತುತ ಪ್ರಧಾನಿ ಮೋದಿ ಸರ್ಕಾರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮಾಡುವ ಮೂಲಕ ನೆಹರೂ ಅವರ ತಪ್ಪನ್ನು ಸರಿ ಮಾಡಿದ್ದಾರೆ. ಅಂದು ಪ್ರಧಾನಿ ನೆಹರೂ ಪಾಕ್ ಜೊತೆ ಒಪ್ಪಂದ ಮಾಡಿಕೊಂಡದ್ದು ತುಷ್ಠೀಕರಣಕ್ಕಾಗಿ, ಶಾಂತಿಗಾಗಿ ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಸಿಂಧೂ ಜಲ ಒಪ್ಪಂದವೇ ಒಂದು ವಿಶಿಷ್ಟ ಒಪ್ಪಂದ. ಒಂದು ದೇಶದ ಪ್ರಮುಖ ನದಿಗಳನ್ನು ಹಕ್ಕೇ ಇಲ್ಲದ ದೇಶಕ್ಕೆ ಹರಿಸಲು ಸಮ್ಮತಿಸಿದ ಒಪ್ಪಂದವನ್ನು ನಾವು ವಿಶ್ವದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇದನ್ನೀಗ ನಾವು ಸ್ಥಗಿತ ಮಾಡಿದ್ದೇವೆ. ಆದರೆ ಈ ಒಪ್ಪಂದದ ಇತಿಹಾಸವನ್ನು ನಾವು ಗಮನಿಸುವುದು ಮುಖ್ಯ. ಕೆಲವು ಜನರು ದೇಶದ ಐತಿಹಾಸಿಕ ವಿಷಯಗಳನ್ನು ಮರೆಯಲು ಬಯಸುತ್ತಾರೆ. ಆದರೆ ಕೆಲವು ವಿಷಯಗಳನ್ನು ಮಾತ್ರ ನೆನಪಿಟ್ಟುಕೊಳ್ಳುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ರಕ್ತ ಮತ್ತು ನೀರು ಜೊತೆಯಾಗಿ ಹರಿಯಲಾರದು. ಪಾಕಿಸ್ತಾನ ಉಗ್ರವಾದವನ್ನು ತ್ಯಜಿಸುವ ವರೆಗೆ ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸಲಾಗುತ್ತದೆ ಎಂದಿದ್ದಾರೆ.
























