ನವದೆಹಲಿ: ಪ್ರಜಾಪ್ರಭುತ್ವದ ಗಂಧಗಾಳಿ ಇಲ್ಲದ, ಭಾರತದ ವಿರುದ್ಧ ಸದಾ ಧಾರ್ಮಿಕ ಮತಾಂಧತೆ ಮತ್ತು ದ್ವೇಷವನ್ನೇ ಉಸಿರಾಡುವ ದೇಶದ ಜೊತೆಗೆ ಮಾತುಕತೆ ಅಸಾಧ್ಯ ಎಂದು ಪಾಕ್ ವಿರುದ್ಧ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುಡುಗಿದ್ದಾರೆ.
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಬಗೆಗಿನ ವಿಪಕ್ಷಗಳ ಗೊಂದಲಗಳಿಗೆ ಉತ್ತರಿಸಿದ ಅವರು, ಯಾವುದೇ ರಾಷ್ಟ್ರ ಪ್ರಜಾಪ್ರಭುತ್ವ ಲಕ್ಷಣಗಳನ್ನು ಹೊಂದಿದ್ದರೆ, ನಾಗರಿಕವಾಗಿದ್ದರೆ ಅಂತಹ ರಾಷ್ಟ್ರಗಳ ಜೊತೆಗೆ ಮಾತುಕತೆ ನಡೆಸಬಹುದು. ಪ್ರಜಾಪ್ರಭುತ್ವದ ಅಂಶವೇ ಗೊತ್ತಿಲ್ಲದ ದೇಶದ ಜೊತೆ ಮಾತುಕತೆ ಅಸಾಧ್ಯ ಎಂದಿದ್ದಾರೆ.
ಹಾಗೆಯೇ ಉಗ್ರವಾದದ ಭಾಷೆ ಭಯ, ರಕ್ತ, ದ್ವೇಷ, ಸಂಭಾಷಣೆ ಅಲ್ಲ. ಗುಂಡುಗಳ ಮೂಲಕ ಸಂಭಾಷಣೆಯನ್ನು ಹತ್ತಿಕ್ಕುವುದು. ರಕ್ತ ಇರುವಲ್ಲಿ ಮಾತುಕತೆ ಸಾಧ್ಯವಿಲ್ಲ. ಪಾಕ್ ತಾನೇ ಹೆಣೆದ ಭಯೋತ್ಪಾದನೆಯ ಬಲೆಯಲ್ಲಿ ಸಿಲುಕಿ ಹಾಕಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಜೊತೆಗೆ ಮೃತಪಟ್ಟ ಉಗ್ರರಿಗೆ ಸರ್ಕಾರಿ ಗೌರವದ ಅಂತ್ಯಕ್ರಿಯೆ ನಡೆಸಿದ ಪಾಕ್ ವಿರುದ್ಧ ಕೆಂಡ ಕಾರಿದ್ದಾರೆ.
























