ನವದೆಹಲಿ: ಲೋಕಸಭೆಯಲ್ಲಿ ಇಂದು ಪಾಕ್ ಉಗ್ರರ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ಗೆ ಸಂಬಂಧಿಸಿದ ಹಾಗೆ ಚರ್ಚೆ ನಡೆದಿದೆ.
ಈ ಸಂಬಂಧ ಮಾಹಿತಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್ ಅನ್ನು ಭಾರತ ಮೇ ತಿಂಗಳಲ್ಲಿ ನಡೆಸಿದ್ದು, ನೂರಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ. ಸುಮಾರು ಒಂಬತ್ತು ಭಯೋತ್ಪಾದಕ ಮೂಲಸೌಕರ್ಯ ಗುರಿಗಳನ್ನು ಹೊಡೆದುರುಳಿಸಲಾಗಿದೆ. ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಈ ಆಪರೇಷನ್ ನಡೆಸಲಾಗಿದೆ ಎಂದರು.
ಹೊಡೆದುರುಳಿಸಲಾದ ಉಗ್ರರು ಮುಜಾಹಿದ್ದೀನ್, ಲಷ್ಕರ್ ಮತ್ತು ಹಿಜ್ಬುಲ್ ಸಂಘಟನೆಗಳ ಜೊತೆಗೆ ನಂಟು ಹೊಂದಿದವರು. ಭಾರತ ತನ್ನ ಮಿಲಿಟರಿ ಉದ್ದೇಶಗಳನ್ನು ಸಾಧಿಸಿದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತ ಮಾಡಿತ್ತು. ಈ ವಿಷಯವನ್ನು ಭಾರತದ ಡಿಜಿಎಂಒ ಪಾಕ್ ಡಿಜಿಎಂಒಗೂ ಮಾಹಿತಿ ನೀಡಿದ್ದರು. ಹಾಗೆಯೇ ಯಾತಕ್ಕಾಗಿ ದಾಳಿ ನಡೆಸಲಾಗಿದೆ ಎಂಬುದನ್ನೂ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಾಚರಣೆಗೂ ಮುನ್ನ ನಮ್ಮ ಸೇನಾ ಪಡೆ ಎಲ್ಲಾ ರೀತಿಯ ಅಂಶಗಳನ್ನೂ ಅಧ್ಯಯನ ಮಾಡಿತ್ತು. ಹಾಗೆಯೇ ಉಗ್ರರಿಗೆ ಗರಿಷ್ಠ ಮಟ್ಟದಲ್ಲಿ ಹಾನಿಯಾಗುವ ದಾರಿಯನ್ನೇ ಆಯ್ಕೆ ಮಾಡಲಾಗಿದೆ. ಆಪರೇಷನ್ ಸಿಂಧೂರ್ ಒಂದು ಐತಿಹಾಸಿಕ ಮಿಲಿಟರಿ ಕ್ರಮ ಎಂದು ಅವರು ತಿಳಿಸಿದರು.
ಉಗ್ರವಾದದ ವಿರುದ್ದ ಭಾರತ ಪರಿಣಾಮಕಾರಿ ನೀತಿ ಅನುಸರಿಸುತ್ತಿದೆ. ನಮ್ಮ ಬಳಿ ಆಧುನಿಕ ಶಸ್ತ್ರಾಸ್ತ್ರಗಳೂ ಇವೆ. ಭಾರತ ಪಾಕಿಸ್ತಾನದ ವಿರುದ್ದ ಎಸ್-400 ಬಳಸಿದೆ ಎಂದೂ ನುಡಿದಿದ್ದಾರೆ.
























