ಬೆಂಗಳೂರಿನಿಂದ ಪ್ರವಾಸ ಬಂದು ಅಪಾಯ ಲೆಕ್ಕಿಸದೆ ಜಲಪಾತಕ್ಕಿಳಿದಿದ್ದ ಯುವಕ
ಶಿವಮೊಗ್ಗ: ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (35) ಎಂದು ಗುರುತಿಸಲಾಗಿದೆ.
ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅಬ್ಬಿ ಫಾಲ್ಸ್ನಲ್ಲಿ ಫೋಟೊ ತೆಗೆಯಲು ಫೋಸ್ ಕೊಡಲು ಫಾಲ್ಸ್ಗೆ ಇಳಿದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಫಾಲ್ಸ್ನಲ್ಲಿ ರಮೇಶ್ ಕಣ್ಮರೆಯಾಗುವ 20 ಸೆಕೆಂಡ್ನ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ರಮೇಶ್ ಬಂಡೆ ಮೇಲೆ ಕುಳಿತಿರು ಕೈಗಳನ್ನು ಮೇಲೆತ್ತಿ ಸಂಭ್ರಮಿಸುತ್ತಿರುವುದು ಕಾಣಿಸುತ್ತಿದೆ. ನಂತರ ಬಂಡೆಯಿಂದ ಕೆಳಗಿಳಿಯುತ್ತಿರುವಾಗ ನೀರಿನ ರಭಸಕ್ಕೆ ರಮೇಶ್ ಕೊಚ್ಚಿ ಹೋಗಿದ್ದಾರೆ. ಕೊಚ್ಚಿಹೋಗುತ್ತಿದ್ದಂತೆ ಸ್ನೇಹಿತರು ಕೂಗಿಕೊಳ್ಳುವುದು ವಿಡಿಯೋ ರೆಕಾರ್ಡ್ ಆಗಿದೆ.
ಘಟನೆಯ ಬಳಿಕ ರಮೇಶ್ ಮೃತದೇಹ ಫಾಲ್ಸ್ನ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























