ಸನಾ: ಯೆಮನ್ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯ ಅವರ ಶಿಕ್ಷೆ ಮುಂದೂಡಪಟ್ಟಿದೆ.
ಜುಲೈ 16 ರಂದು ನಿಮಿಷಾಗೆ ಯೆಮನ್ನಲ್ಲಿ ಗಲ್ಲು ಶಿಕ್ಷೆ ನಿಗದಿಯಾಗಿತ್ತು. ಆದರೆ ಭಾರತದ ನಿರಂತರ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದ್ದು ನಿಮಿಷಾ ಗಲ್ಲು ಶಿಕ್ಷೆ ಮುಂದೂಡಲ್ಪಟ್ಟಿದೆ.
ಈ ಪ್ರಕರಣದ ಕುರಿತು ಪ್ರಸಿದ್ಧ ಸೂಫಿ ವಿದ್ವಾಂಸ ಶೇಕ್ ಹಬೀಬ್ ಉಮರ್ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆದಿತ್ತು. ಈ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು, ನ್ಯಾಯಮೂರ್ತಿಗಳು ಮತ್ತು ಮೃತನ ಕುಟುಂಬಸ್ಥರು ಭಾಗವಹಿಸಿದ್ದರು.
ಯೆಮನ್ನಲ್ಲಿ 2017ರಲ್ಲಿ ವ್ಯವಹಾರ ಪಾಲುದಾರ ಅಬ್ದೋ ಮಹ್ದಿಯನ್ನು ಕೊಲೆ ಮಾಡಿ, ಗಲ್ಲು ಶಿಕ್ಷೆಗೊಳಗಾದ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ಮಾತುಕತೆಗಳು ಮುಂದುವರೆಯುತ್ತಿದೆ. ಯೆಮೆನ್ನಲ್ಲಿ ಶರಿಯಾ ಕಾನೂನಿನನ್ವಯ, ಬ್ಲಡ್ ಮನಿ ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಕಾನೂನುಬದ್ಧವಾದ ಪರಿಹಾರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಿಮಿಷಾ ಕುಟುಂಬಸ್ಥರು ಮೃತನ ಕುಟುಂಬಕ್ಕೆ ಬ್ಲಡ್ ಮನಿ ನೀಡಲು ಒಪ್ಪಿದ್ದರೂ, ಈ ಪರಿಹಾರಕ್ಕೆ ಮೃತನ ಕುಟುಂಬ ವರ್ಗ ಒಪ್ಪಿರಲಿಲ್ಲ.
























