ಸುಳ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಘಟಕದ ವತಿಯಿಂದ ಸುಳ್ಯದ ಪ.ಪೂ. ಕಾಲೇಜಿನ ಇಕೋ ಕ್ಲಬ್’ನ ಸಹಯೋಗದಲ್ಲಿ ಪರಿಸರ ಜಾಗೃತಿಯಾನದ ಸರಣಿ ಕಾರ್ಯಕ್ರಮಕ್ಕೆ ಸುಳ್ಯದ ಸರಕಾರಿ ಚಾಲನೆ ನೀಡಲಾಯಿತು.

ಹಸಿರು ಕ್ರಾಂತಿಯ ಹರಿಕಾರ, ಗ್ರೀನ್ ಹೀರೋ, ಡಾ. ಆರ್. ಕೆ. ನಾಯರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯಲ್ಲಿರುವ ಪ್ರತಿಯೊಂದು ಸೂಕ್ಷ್ಮಾಣು ಜೀವಿಗಳು ಪರಿಸರವನ್ನು ಸ್ವಚ್ಛಂದಗೊಳಿಸಲು ಸಾಧ್ಯವಾಗುವುದಾದರೆ ಮನುಷ್ಯನಿಗೆ ಯಾಕಾಗಬಾರದು. ಅದಕ್ಕಾಗಿ ಪ್ರತಿಯೊಬ್ಬ ಮಾನವನು ಚಿಂತಿಸಿ ಅದನ್ನು ಉಳಿಸಿದಲ್ಲಿ ಮಾತ್ರ ಮುಂದಿನ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಪ್ರಕೃತಿಯನ್ನು ಪ್ರೀತಿಸಿದರೆ ಮಾತ್ರ ಅದು ನಮ್ಮನ್ನು ಕಾಪಾಡುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಅದನ್ನು ಪ್ರೀತಿಸಿ ಎಂದು ಅಭಿಪ್ರಾಯಪಟ್ಟರು.
ಕೃಷಿ ಕ್ಷೇತ್ರಕ್ಕೆ ವಿಷ ಬರೆಸುವ ಕೆಲಸ ಮಾಡಬೇಡಿ. ಪ್ರಕೃತಿ ಮುನಿಸಿಕೊಂಡರೆ ಆ ದುರಂತವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲವೆಂಬುದು ಇತ್ತೀಚೆಗಿನ ಪ್ರಕರಣವೇ ಸಾಕ್ಷಿ. ಪ್ರಕೃತಿಯ ವಿರುದ್ಧ ಹೋಗಿ ಬೇಕುಂತಲೇ ವಿಕೋಪಗಳನ್ನು ತರಿಸಿಕೊಳ್ಳುತ್ತೇವೆ ಎಂದ ಅವರು ಸಣ್ಣ ಗಾತ್ರದ ಇರುವೆ ಯನ್ನು ಸಂರಕ್ಷಣೆಯನ್ನು ಮಾಡಿದರೆ ಆನೆಯನ್ನು ಸಂರಕ್ಷಣೆ ಮಾಡಿದಂತೆ, ಅದರಂತೆ ಗಿಡಗಳನ್ನು ರಕ್ಷಣೆ ಮಾಡಿ ಮರಗಳು ಅದರಷ್ಟಕ್ಕೆ ಉಳಿಯುತ್ತವೆ. ಪ್ರಕೃತಿ ಸಂರಕ್ಷಣೆಗೆ ನಮ್ಮ ಭಾವನೆ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು.
ಸುಳ್ಯ ಕಸಾಪದ ಅಧ್ಯಕ್ಷ ಚಂದ್ರಶೇಖರ ಪೇರಾಲು ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಸುಳ್ಯ ವಲಯಾರಣ್ಯಾಧಿಕಾರಿ ಎನ್. ಮಂಜುನಾಥ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಹಿರಿಯ ಶಿಕ್ಷಕ ಡಾ. ಸುಂದರ್ ಕೇನಾಜೆ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ತಾಲೂಕು ಘಟಕದ ಗೌರವ ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ಆರ್.ಕೆ.ನಾಯರ್ ಮತ್ತು ಎನ್.ಮಂಜುನಾಥ ರವರನ್ನು ಗೌರವಿಸಲಾಯಿತು. ಶುಭದಾ ಆರ್. ಪ್ರಕಾಶ್ ಮತ್ತು ಲಿಪಿಶ್ರೀ ಪರಿಸರ ಗೀತೆ ಹಾಡಿದರು. ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಸ್ವಾಗತಿಸಿ, ಇಕೋ ಕ್ಲಬ್’ನ ಸಂಚಾಲಕಿ ಪೂರ್ಣಿಮಾ ವಂದಿಸಿದರು.
ಕಸಾಪದ ಗೌರವ ಕಾರ್ಯದರ್ಶಿ, ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಕೇಶವ ಸಿ.ಎ., ರಮೇಶ್ ನೀರಬಿದಿರೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಂದೆ ಸರಣಿ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು, ಸರಕಾರಿ ಪ್ರೌಢಶಾಲೆ ಎಲಿಮಲೆ, ರೋಟರಿ ಪದವಿ ಪೂರ್ವ ವಿದ್ಯಾಲಯ ಮಿತ್ತಡ್ಕ, ಸರಕಾರಿ ಪ್ರೌಢಶಾಲೆ ಅಜ್ಜಾವರ, ವಿದ್ಯಾ ಬೋಧಿನೀ ಪ್ರೌಢಶಾಲೆ ಬಾಳಿಲ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಸ್ನೇಹ ಪ್ರೌಢಶಾಲೆ ಸುಳ್ಯ, ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು, ನೆಹರು ಮೆಮೋರಿಯಲ್ ಪದವಿ ಪೂರ್ವ ವಿದ್ಯಾಲಯ ಸುಳ್ಯ ಇಲ್ಲಿ ನಡೆದು ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕದಲ್ಲಿ ಸಮಾಪನಗೊಳ್ಳಲಿದೆ.
























