ಬೆಂಗಳೂರು: ರಾಜ್ಯ ಸರ್ಕಾರ ಹಿಂದೂ ದೇವಾಲಯಗಳಿಗೆ ಅಪಚಾರ ಮಾಡುತ್ತಿದ್ದು, ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ಸುಪರ್ದಿಗೆ ಪಡೆಯಲು ಮುಂದಾಗಿರುವುದು ಖಂಡನೀಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದ ಈ ಕ್ರಮಕ್ಕೆ ಭಕ್ತರು ವಿಚಲಿತರಾಗುವ ಅಗತ್ಯ ಇಲ್ಲ. ಸರ್ಕಾರ ಇಂತಹ ನಿಲುವನ್ನು ಹಿಂಪಡೆಯುವ ವರೆಗೂ ನಮ್ಮ ಹೋರಾಟ ನಡೆಯುತ್ತದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ಭಕ್ತರಿಗೆ ಸೇರಿದ್ದಾಗಿದೆ ಎಂದು ಅವರು ನುಡಿದಿದ್ದಾರೆ.
ಸರ್ಕಾರ ಯಾವುದೇ ಕಾರಣವಿಲ್ಲದೆ ಇಂತಹ ನಿರ್ಧಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಧನ ಸಹಾಯ ಪಡೆಯುವ ದೇಗುಲಗಳ ಮೇಲೆ ಕಣ್ಣಿರಿಸಿದ್ದು, ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವುದು ತಪ್ಪು. ಈ ನಿರ್ಧಾರವನ್ನು ಸರ್ಕಾರ ಹಿಂದಕ್ಕೆ ಪಡೆಯುವ ವರೆಗೂ ನ್ಯಾಯಾಲಯದಲ್ಲೂ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇವರಿಗೆ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಹಿಂದೂ ವಿರೋಧಿ ಸರ್ಕಾರ ದೇವಸ್ಥಾನದ ಆಡಳಿತವನ್ನು ಭಕ್ತರಿಗೆ ಬಿಡಬೇಕು. ಕೆಲವು ಇಲಾಖೆಗಳಲ್ಲಿ ಕೋಟ್ಯಂತರ ರೂ. ಹಗರಣ ನಡೆಸುತ್ತಿದೆ. ಸರ್ಕಾರ ಧೈರ್ಯವಿದ್ದರೆ ಅವ್ಯವಹಾರ ಆರೋಪ ಇರುವ ಮಸೀದಿ – ಚರ್ಚ್ ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿ ಎಂದು ಗುಡುದಿದ್ದಾರೆ. ದೇವಾಲಯಗಳು ಸರ್ಕಾರದ ಆಸ್ತಿ ಅಲ್ಲ ಎಂದಿದ್ದಾರೆ.
























