ಪುತ್ತೂರು: ಬನ್ನೂರಿನ ಕೃಷ್ಣ ನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೇದವ್ಯಾಸರ ಜನ್ಮದಿನವಾದ ಗುರು ಪೂರ್ಣಿಮೆಯನ್ನು ಗುರುವಾರ ಆಚರಿಸಲಾಯಿತು.

ನಿವೃತ್ತ ಪಂಚಾಯತ್ ಅಧಿಕಾರಿ ಸುಂದರ ಗೌಡ ಕಳುವಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ದಿನದ ಮಹತ್ವದ ಸಂದೇಶ ನೀಡಿ, ಆಧ್ಯಾತ್ಮಿಕ ಗುರುವಾದ ವೇದವ್ಯಾಸರು ವೇದವನ್ನು ವಿಭಾಗ ಮಾಡಿ ಅವುಗಳಿಗೆ ಪ್ರಸರಣ ಕೊಟ್ಟು ಆ ಜ್ಞಾನವನ್ನು ಲೋಕಕ್ಕೆ ಸಮರ್ಪಿಸಿದರು. ಅವರ ಜ್ಞಾನ ಅನುಪಮ ಮತ್ತು ಮಹತ್ವದ್ದಾಗಿದೆ. ಇಂದು ಎಲ್ಲಾ ಲೌಕಿಕ ಗುರುಗಳಿಗೆ ಆದರ್ಶ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಮಾತನಾಡಿ, ಯುಗಗಳಿಗೆ ಜ್ಞಾನವನ್ನು ಪಸರಿಸಿರುವ ವೇದವ್ಯಾಸ ಎಣಿಸಿದ ಕೃಷ್ಣ ದೈಪಾಯನವು ಜ್ಞಾನದ ನಿಧಿ ಮತ್ತು ಬದುಕಿನ ಸಾರವನ್ನು ನೀಡಿದರು ಎಂದರು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಎ.ವಿ. ನಾರಾಯಣ, ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ನಿರ್ದೇಶಕರಾದ ಡಾ. ಅನುಪಮಾ, ಪ್ರತಿಭಾ ದೇವಿ, ಹೇಮಾವತಿ ಕಳುವಾಜೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗಡೆ, ಪ್ರಾಂಶುಪಾಲ ಅಮರನಾಥ ಪಟ್ಟೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಕುಮಾರಿ ಜೋಶ್ನಾ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕಿ ರಂಜಿತಾ ರೈ ಸ್ವಾಗತಿಸಿದರು. ಶಿಕ್ಷಕಿ ರಾಧಾ ಅತಿಥಿ ಪರಿಚಯ ಮಾಡಿದರು. ಶಿಕ್ಷಕಿ ರೀಮಾ ಲೋಬೊ ವಂದಿಸಿದರು. ಶಿಕ್ಷಕಿ ಯಶುಭ ಕಾರ್ಯಕ್ರಮ ನಿರೂಪಿಸಿದರು.
























