ಶಾಲಾ ಮಕ್ಕಳಿಗೆ ಶೂ ಕೊಡಿಸಲು ದಾನಿಗಳ ಮೊರೆ ಹೋಗಿರುವುದಕ್ಕೆ ಲೇವಡಿ
ಬೆಂಗಳೂರು: ಶಾಲಾ ಮಕ್ಕಳ ಶೂ-ಸಾಕ್ಸ್ಗಾಗಿ ದಾನಿಗಳ ಮೊರೆಹೋದ ರಾಜ್ಯ ಸರ್ಕಾರದ ನಡೆ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಗ್ಯಾರಂಟಿ ಕೊಟ್ಟು ದಿವಾಳಿಯಾಗಿರುವ ಸರ್ಕಾರದ ಬಳಿ ಶಾಲಾ ಮಕ್ಕಳಿಗೆ ಬೂಟು ಕೊಡಲು ಕೂಡ ಗತಿಯಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ. ಬಿಜೆಪಿ ಬೂಟ್ ಪೇ ಹೆಸರಿನಲ್ಲಿ ಹೊಸ ಅಭಿಯಾನ ಆರಂಭಿಸಿದೆ.
ಮಕ್ಕಳ ಶೂ ಮೇಲೆ ಬೂಟ್ ಪೇ ಎಂದು ಬರೆದು ಕ್ಯೂಆರ್ ಸ್ಕ್ಯಾನ್ ಪೋಸ್ಟರ್ ಮೂಲಕ ಬಿಜೆಪಿ ಟಕ್ಕರ್ ಕೊಟ್ಟಿದೆ. ಕಾಂಗ್ರೆಸ್ನ ಶೇ.40 ಫೋನ್ ಪೇ ಮಾದರಿಯಲ್ಲೇ ಬೂಟ್ ಪೇ ಸ್ಕ್ಯಾನ್ ಮಾಡಿ ಸರ್ಕಾರವನ್ನು ಅಣಕಿಸಿದೆ. ಸಂಪೂರ್ಣ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ ನೀಡಲು ಸಹ ಹಣವಿಲ್ಲ. ಹೀಗಾಗಿ ಶಾಲಾ ಮಕ್ಕಳಿಗೆ ಶೂ ದಾನ ಮಾಡಲು ಬೂಟ್ ಪೇ ಸ್ಕ್ಯಾನ್ ಮಾಡಿ ಅಂತ ಟ್ವೀಟ್ನಲ್ಲಿ ಸರ್ಕಾರಕ್ಕೆ ಬಿಜೆಪಿ ಮುಖಭಂಗ ಮಾಡಿದೆ.

ಜಗತ್ತಿನಲ್ಲಿ ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಸರ್ಕಾರ ದಿವಾಳಿಯಾಗಿರುವುದು ಸಹ ಅಷ್ಟೇ ಸತ್ಯ!! ಲಾಟರಿ ಸಿಎಂ
ಅವರು ಮೇಜು ಕುಟ್ಟಿ ತಮ್ಮ ಸರ್ಕಾರ ದಿವಾಳಿಯಾಗಿಲ್ಲ ಎಂದು ಬಡಾಯಿ ಕೊಚ್ಚಿಕೊಂಡರೂ, ಸರ್ಕಾರದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತ್ರ ಶ್ವೇತ ಪತ್ರ ಹೊರಡಿಸಲು ಮಾತ್ರ ಅವರು ತಯಾರಿಲ್ಲ.
ಈಗ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ಸಹ ಸರ್ಕಾರದ ಬಳಿ ದುಡ್ಡಿಲ್ಲ ಎಂಬುದು ವರದಿಯಾಗಿದೆ. ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ಯಾರಾದರೂ ದಾನಿಗಳು ಸಿಗುತ್ತಾರಾ ಎಂದು ಚಾತಕಪಕ್ಷಿ ರೀತಿ ಹುಡುಕುತ್ತಿದೆ. ಇದನ್ನು ಗಮನಿಸಿದರೆ ಸಾಕು ಸರ್ಕಾರ ಅದ್ಯಾವ ಪರಿ ದಿವಾಳಿಯಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಬಿಜೆಪಿ ಟ್ವೀಟ್ ಮಾಡಿ ಅದರ ಕೆಳಗೆ ಭಿಕ್ಷಾ ಪಾತ್ರೆ ಹಿಡದು ಕೂತಿರುವ ಸಿದ್ದರಾಮಯ್ಯ, ಡಿ.ಕೆ.ಶೀವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಚಿತ್ರ ಹಾಕಿದೆ.
ಇನ್ನೊಂದು ಟ್ವೀಟ್ನಲ್ಲಿ ಸಂಪೂರ್ಣ ದಿವಾಳಿಯಾಗಿರುವ ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ ನೀಡಲು ಸಹ ಹಣವಿಲ್ಲ, ಹೀಗಾಗಿ ಶಾಲಾ ಮಕ್ಕಳಿಗೆ ಶೂ ದಾನ ಮಾಡಲು “ಬೂಟ್ ಪೇ” Scan ಮಾಡಿ ಎಂದು ಬರೆದುಕೊಂಡಿದೆ.
ಮಕ್ಕಳ ಶೂ-ಸಾಕ್ಸ್ ಖರೀದಿಗೆ ಬಿಡುಗಡೆಯಾಗಿದ್ದ 111.88 ಕೋಟಿ ರೂ. ಅನುದಾನ ಯಾವ ರಾಜ್ಯದ ಕಾಂಗ್ರೆಸ್ ಚುನಾವಣಾ ಫಂಡ್ಗೆ ಬಳಕೆ ಆಯ್ತು? ಹಣ ಬಿಡುಗಡೆಯಾದರೂ ದಾನಿಗಳನ್ನು ಹುಡುಕುತ್ತಿದ್ದರೆ ಅನುದಾನ ಯಾರ ಜೇಬು ಸೇರಿರಬಹುದು? ಅಂತ ಬಿಜೆಪಿ ಪ್ರಶ್ನಿಸಿದೆ.
























